ಬಂಟ್ವಾಳ: ಏಪ್ರಿಲ್ 4 ರಂದು ಬಿ.ಸಿ.ರೋಡ್ ಅಜ್ಜಿಬೆಟ್ಟು ಎಂಬಲ್ಲಿ ಯುವಕನೋರ್ವನಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿ.ಸಿ.ರೋಡ್ ಪರ್ಲ್ಯ ನಿವಾಸಿಗಳಾದ ಇಮ್ರಾನ್ ಮತ್ತು ಸಫ್ವಾನ್ ಬಂಧಿತ ಆರೋಪಿಗಳು.
ಏನಿದು ಪ್ರಕರಣ?
ಬ್ರಹ್ಮರಕೋಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ತುಂಬೆಯಿಂದ ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದು, ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆ ಅಜ್ಜಿಬೆಟ್ಟು ಕ್ರಾಸ್ನೊಳಗೆ ಬೈಕನ್ನು ತಿರುಗಿಸಿ ಅಂಗಡಿಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದರು.ಆದರೆ ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳು ನಿಲ್ಲಿಸದಲ್ಲೇ ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಎರಡು ತಂಡಗಳ ತನಿಖೆ
ಚೂರಿ ಇರಿತ ಪ್ರಕರಣದ ತನಿಖೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ಮಾಹಿತಿಯ ಆಧಾರದಲ್ಲಿ ಆರೋಪಿ ಇಮ್ರಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಸಫ್ವಾನ್ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಎಸ್.ಡಿ.ಪಿ.ಐ. ಮುಖಂಡನ ಪುತ್ರ:
ಆರೋಪಿ ಸಫ್ವಾನ್ ಎಸ್.ಡಿ.ಪಿ.ಐ. ಮುಖಂಡ ಶಾಹುಲ್ ಹಮೀದ್ ಎಸ್.ಎಚ್. ಅವರ ಹಿರಿಯ ಪುತ್ರನಾಗಿದ್ದು, ಗುರುವಾರ ತಡ ರಾತ್ರಿ ಶಾಹುಲ್ ಹಮೀದ್ ಅವರ ಮನೆಗೆ ಜೀಪಿನಲ್ಲಿ ತೆರಳಿದ ಪೊಲೀಸರು ಸಫ್ವಾನ್ ಮನೆಯಲ್ಲಿ ಇರದ ಕಾರಣ ಶಾಹುಲ್ ಹಮೀದ್ ಮತ್ತು ಅವರ ಮತ್ತಿಬ್ಬರು ಪುತ್ರರನ್ನು ಠಾಣೆಗೆ ಕರೆದುಕೊಂಡು ಬಂದು ಕೂರಿಸಿದ್ದರು.
ಶಾಹುಲ್ ಹಮೀದ್ ಮತ್ತು ಅವರ ಇಬ್ಬರು ಮಕ್ಕಳ ಬಿಡುಗಡೆಗೆ ಎಸ್.ಡಿ.ಪಿ.ಐ. ಪಕ್ಷದ ಮುಖಂಡರು ಶುಕ್ರವಾರ ಇಡೀ ದಿನ ಪೊಲೀಸ್ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದು, ಸಂಜೆ ಜಿಲ್ಲಾ ಎಸ್ಪಿಯವರು ಆಗಮಿಸಿದ ಬಳಿಕ ಆರೋಪಿ ಸಫ್ವಾನ್ ಠಾಣೆಗೆ ಶರಣಾಗಿದ್ದು ಆ ಬಳಿಕ ಶಾಹುಲ್ ಹಮೀದ್ ಮತ್ತು ಅವರ ಇಬ್ಬರು ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಮನೋಜ್ ಅವರು ವಿದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದು ಎರಡು ವಾರಗಳ ಹಿಂದೆಯಷ್ಟೆ ಊರಿಗೆ ಬಂದಿದ್ದು, ಅವರಿಗೆ ಎಪ್ರಿಲ್ ಅಂತ್ಯದಲ್ಲಿ ಮದುವೆ ನಿಶ್ಚಿಯವಾಗಿತ್ತು.
ತನಿಖೆಯ ದಿಕ್ಕು ತಪ್ಪಿಸಲು ಸುಳ್ಳು ಸಂದೇಶ ರವಾನೆ:
ಕೊಲೆಯತ್ನ ಪ್ರಕರಣ ನಡೆದ ಮರುದಿನ, ಮನೋಜ್ ಗೆ ತಾನೇ ಇರಿದಿರೋದಾಗಿ ಇರಿತಕ್ಕೆ ಒಳಗಾದ ಯುವಕ ಮನೋಜ್ ಸಹೋದರ ಕಿಶೋರ್ ಒಪ್ಪಿಕೊಂಡಿದ್ದಾನೆ ಎನ್ನುವ ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುಮಾರು ಆರು ತಿಂಗಳಿಂದ ನನ್ನ ಹೆಂಡತಿಗೆ ಮನೋಜ್ ಅಶ್ಲೀಲ ಮೆಸೇಜ್, ವಿಡಿಯೋ ,ಫೊಟೊ ಕಳುಹಿಸಿ ದೈಹಿಕ ಸಂಪರ್ಕಕ್ಕೆ ಬೆಳೆಸೋದಕ್ಕೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ನನ್ನ ತಮ್ಮನಿಗೆ ಕಿಶೋರ್ ತುಂಬಾ ಬುದ್ದಿ ಮಾತು ಹೇಳಿದ್ದ. ಆದ್ರೂ ಅವನ ವಿಕೃತ ಕಮ್ಮಿಯಾಗಿರಲಿಲ್ಲ. ಇದರಿಂದ ಕೋಪಗೊಂಡ ಕಿಶೋರ್ ತಾನೇ ನನ್ನ ತಮ್ಮನಿಗೆ ಚೂರಿಯಿಂದ ಇರಿದಿದ್ದಾನೆ, ಅಲ್ಲದೇ ಮನೋಜ್ ಅಣ್ಣ ಕಿಶೋರ್ ಬಂಟ್ವಾಳ ಪೋಲಿಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ಸಂದೇಶವೊಂದು ಎಲ್ಲರ ವಾಟ್ಸಾಪ್ ನಲ್ಲಿ ಇಂದು ಹರಿದಾಡಿತ್ತು.
ಆದರೆ ವಾಸ್ತವದಲ್ಲಿ ಮನೋಜ್ ಗೆ ಅಣ್ಣತಮ್ಮಂದಿರು ಯಾರೂ ಇಲ್ಲ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು