ಮಂಗಳೂರು: ಹಳೆಯ ಸಮರ ಟ್ಯಾಂಕ್ ಟಿ-55 ಮಂಗಳೂರಿಗೆ ಆಗಮಿಸಿದ್ದು, ಈ ಯುದ್ಧ ಟ್ಯಾಂಕ್ ಭಾರತ-ಪಾಕಿಸ್ಥಾನದ 1965, 1971ರ ಯುದ್ಧಗಳಲ್ಲಿ ಪಾಲ್ಗೊಂಡಿತ್ತು ಎನ್ನಲಾಗಿದೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳೂರಿಗೆ ಟ್ಯಾಂಕ್ ಮಂಜೂರು ಮಾಡುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪುಣೆಯಿಂದ ಈ ವಿಶೇಷ ಟ್ಯಾಂಕ್ ಅನ್ನು ಟ್ರೈಲರ್ ಟ್ರಕ್ನಲ್ಲಿ ತರಲಾಗಿದೆ. ಸೋಮವಾರ ರಾತ್ರಿ ಟ್ಯಾಂಕ್ ಮಂಗಳೂರಿಗೆ ತಲುಪಿದ್ದು, ತಾತ್ಕಾಲಿಕವಾಗಿ ಸರ್ಕ್ಯೂಟ್ ಹೌಸ್ ಬಳಿ ಇರಿಸಲಾಗಿದೆ.
ಸೈನಿಕರ ಶೌರ್ಯವನ್ನು ಗೌರವಿಸಲು ಮತ್ತು ಯುವಕರು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸಲು ನಗರದಲ್ಲಿ ವಿಶೇಷ ಆಕರ್ಷಣೆಯಾಗಿ ಟಿ-55 ಟ್ಯಾಂಕ್ ಅನ್ನು ಸ್ಥಾಪಿಸಲಾಗುತ್ತಿದೆ. ಕದ್ರಿ ಯುದ್ಧ ಸ್ಮಾರಕದ ಬಳಿ ಶೀಘ್ರದಲ್ಲೇ ಸರಿಯಾದ ವೇದಿಕೆಯನ್ನು ನಿರ್ಮಿಸಲಾಗುವುದು, ಅಲ್ಲಿ ಟ್ಯಾಂಕ್ ಅನ್ನು ಶಾಶ್ವತವಾಗಿ ಪ್ರದರ್ಶಿಸಲಾಗುವುದು ಎಂದು ಕ್ಯಾಪ್ಟನ್ ಚೌಟ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ವತಿಯಿಂದ ತರಿಸಲಾಗಿದ್ದು, ಅದರ ನಿರ್ವಹಣೆಯನ್ನು ಪಾಲಿಕೆ ನಡೆಸಲಿದೆ. ಇನ್ನು ಈ ಟ್ಯಾಂಕ್ ಅನ್ನು ಮಂಗಳೂರಿಗೆ ತರಿಸಲು ಮುಖ್ಯ ಉದ್ದೇಶ ಮಂಗಳೂರಿಗೆ ವಿಶೇಷ ಆಕರ್ಷಣೆಯಾಗಿ ಹಾಗೂ ವೀರ ಯೋಧರ ಸೇವೆ ಗುರುತಿಸಿ, ಸೇನೆ ಸೇರುವುದಕ್ಕೆ ಸ್ಫೂರ್ತಿಯಾಗಲು ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಕದ್ರಿ ಯುದ್ಧ ಸ್ಮಾರಕದ ಬಳಿಯಲ್ಲಿ ಸೂಕ್ತವಾದ ವೇದಿಕೆಯನ್ನು ನಿರ್ಮಿಸಿ ಅದರಲ್ಲಿ ಟ್ಯಾಂಕ್ ಅನ್ನು ಇರಿಸಲಾಗುವುದು ಎಂದು ಕ್ಯಾಪ್ಟನ್ ಚೌಟ ತಿಳಿಸಿದ್ದಾರೆ.


