Monday, May 20, 2024
Homeಕರಾವಳಿಮಂಗಳೂರು: ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಶೆಣೈ ಇನ್ನಿಲ್ಲ

ಮಂಗಳೂರು: ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಶೆಣೈ ಇನ್ನಿಲ್ಲ

spot_img
- Advertisement -
- Advertisement -

ಮಂಗಳೂರು: ಖ್ಯಾತ ಕೊಂಕಣಿ ಹೋರಾಟಗಾರ, ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯರಾಗಿದ್ದ ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ್ ಮಾಧವ್ ಶೆಣೈ(87) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ.

ಕಳೆದೆರಡು ತಿಂಗಳಿಂದ ವಯೋಸಹಜವಾಗಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಬಸ್ತಿ ವಾಮನ್ ಶೆಣೈ ಅವರು 6 ನವೆಂಬರ್ 1934 ರಂದು ಬಂಟ್ವಾಳದಲ್ಲಿ ಜನಿಸಿದ್ದು, ಅವರ ತಂದೆ ಬಸ್ತಿ ಮಾಧವ್ ಶೆಣೈ ಅವರು ಮೋತ್ರ ಮಾಧವ್ ಎಂದು ಜನಪ್ರಿಯರಾಗಿದ್ದರು, ಬಸ್ತಿ ಮಾಧವ ಶೆಣೈ ಅವರು ತಮ್ಮ ನಾಯಕತ್ವದ ಗುಣಗಳಿಂದಾಗಿ ಎಲ್ಲ ಸಮುದಾಯದ ಜನರಿಂದ ಗೌರವಕ್ಕೆ ಪಾತ್ರರಾಗಿದ್ದರು.

ವಾಮನ್ ಶೆಣೈ ಅವರು 1980 ರಿಂದ ಕೊಂಕಣಿ ಭಾಷಾ ಮಂಡಲದಲ್ಲಿ ತೊಡಗಿಸಿಕೊಂಡಿದ್ದರು. ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಜನರನ್ನು ಸಂಘಟಿಸಲು ಕೊಂಕಣಿ ಜಾಥಾ ಚಳವಳಿಯ ಸಂಘಟನಾ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಯಿತು. ಅವರು 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿದ್ದು, 1994-95ರಲ್ಲಿ ಅವರ ಪ್ರಯತ್ನದಿಂದಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂತು.

ಇನ್ನು ವಾಮನ್ ಶೆಣೈ ಅವರು 1995 ರಲ್ಲಿ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮಾವೇಶವನ್ನು ಆಯೋಜಿಸಿದ್ದು, ಅವರಿಗೆ ‘ವಿಶ್ವ ಕೊಂಕಣಿ ಸರ್ದಾರ್’ (ಕೊಂಕಣಿಯ ವಿಶ್ವ ನಾಯಕ) ಎಂಬ ಬಿರುದು ನೀಡಿ ಗೌರವಿಸಲಾಯಿತು. 1996 ರಲ್ಲಿ ಮೊದಲ ಉತ್ತರ ಅಮೆರಿಕಾದ ಕೊಂಕಣಿ ಸಮಾವೇಶವು ಯುಎಸ್ಎಯ ನ್ಯೂಜೆರ್ಸಿಯಲ್ಲಿ ನಡೆದಿದ್ದು, 1997 ರಲ್ಲಿ ಶೆಣೈ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು ಮತ್ತು 2001 ರವರೆಗೆ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಅವರು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿಯನ್ನು ಐಚ್ಛಿಕ ಮೂರನೇ ಭಾಷೆಯಾಗಿ ಪರಿಚಯಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು.

2002ರಲ್ಲಿ ಮಂಗಳೂರಿನಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ತಿನ 20ನೇ ಅಧಿವೇಶನವನ್ನು ಆಯೋಜಿಸಿದ್ದರು. 2004 ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿದ್ದು, 2008 ರಲ್ಲಿ, KLCF ಬ್ಯಾನರ್ ಅಡಿಯಲ್ಲಿ, ಶೆಣೈ ಅವರು ಕೊಂಕಣಿ ಬರಹಗಾರರು ಮತ್ತು ವಿದ್ವಾಂಸರ ನಡುವೆ ದೇಶದ ಇತರ ಭಾಷೆಗಳಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಂವಹನದ ಅವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ವಿಶ್ವ ಕೊಂಕಣಿ ಅಭಿಯಾನವನ್ನು ಪ್ರಾರಂಭಿಸಿದರು.

ಇನ್ನು ನಾಳೆ ಜನವರಿ 3 ರಂದು ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9 ರಿಂದ 10.ರವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

- Advertisement -
spot_img

Latest News

error: Content is protected !!