ಬಂಟ್ವಾಳ: ನಗರದ ಲೊರೆಟ್ಟೋ ಟಿಪ್ಪು ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಲೊರೆಟ್ಟೋ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಎಂದು ಗುರುತಿಸಲಾಗಿದೆ.
ಲೊರೆಟ್ಟೋ ಟಿಪ್ಪು ನಗರದಲ್ಲಿ ಶಂಶುದ್ದೀನ್ ಎಂಬಾತನ ಮನೆಯ ಬಳಿಯ ಅಕ್ರಮ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮುಂಜಾನೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತೃತ್ವದಲ್ಲಿ ಬಂಟ್ವಾಳ ಪೊಲೀಸರ ತಂಡ ದಾಳಿ ನಡೆಸಿತ್ತು.
ಬಂಧಿತರಿಂದ ನಾಲ್ಕು ಜಾನುವಾರು, ಎರಡು ಕಿಂಟ್ವಾಲ್ ದನದ ಮಾಂಸ, ಒಂದು ಪಿಕಪ್ ವಾಹನ ಹಾಗೂ ಜಾನುವಾರು ಕಡಿದು ಮಾಂಸ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯ ವೇಳೆ ಮನೆಯ ಮಾಲಕ ಹಾಗೂ ಉಳಿದವರು ಪರಾರಿಯಾಗಿದ್ದಾರೆ.
ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.