
ಬಂಟ್ವಾಳ: ನೀಟ್ ಹೋರಾಟಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಪೋಸ್ಟ್ ಹಾಕಿದ ಆರೋಪದಡಿ ಕೇಪು ಗ್ರಾಮದ ನಿವಾಸಿ ಭರತ್ (36) ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ .
‘ಕೆಎಫ್ಸಿ ಖಂಡಿಗ’ ಎಂಬ ವಾಟ್ಸಾಆ್ಯಪ್ ಗ್ರೂಪ್ನಲ್ಲಿ ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಕೋಮು ಭಾವನೆ ಕೆರಳಿಸುವ ಬರಹಗಳನ್ನು ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರಿನೊಂದಿಗೆ ನೀಡಲಾದ ಸ್ಕ್ರೀನ್ಶಾಟ್ಗಳನ್ನು ಪರಿಶೀಲಿಸಿದಾಗ, ಗ್ರೂಪ್ ಸದಸ್ಯನಾಗಿದ್ದ ಭರತ್ ಜುಲೈ 23ರಂದು ಆ ಬರಹವನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲೂ ಹಾಕಿಕೊಂಡಿರುವುದು ದೃಢಪಟ್ಟಿತ್ತು.
ಈ ಕೃತ್ಯದ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS 2023) ಕಲಂ 197(1)(ಎ), 197(1)(ಸಿ) ಹಾಗೂ 353(2) ರಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಭಂಗ ಉಂಟು ಮಾಡುವ ಹಾಗೂ ಸೌಹಾರ್ದತೆಗೆ ಧಕ್ಕೆ ತರುವಂತಹ ಬರಹಗಳನ್ನು ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.


