ಬೆಳ್ತಂಗಡಿ : ಪೌರ ಕಾರ್ಮಿಕರಿಗೆ ದೊರಕುವ ಗೃಹಭಾಗ್ಯ , ನಿವೇಶನ ಮೊದಲಾದ ಸಂವಿಧಾನಬದ್ಧ ಸವಲತ್ತುಗಳನ್ನು ನಿರಾಕರಣೆ ಮಾಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ ರಘು ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದರು.
ಅವರು ಸೆ.7 ರಂದು ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು ಮತ್ತು ಪಂಚಾಯತ್ ಸ್ವಚ್ಚತಾ ಕಾರ್ಮಿಕರ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ , ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ ಗೃಹಭಾಗ್ಯ ಯೋಜನೆಯನ್ನು ನಿರಾಕರಿಸಲಾಗುತ್ತಿದೆ ಎಂದರು. ಕಾರ್ಯದರ್ಶಿ ಚಂದ್ರಭೋವಿ ಮಾತನಾಡಿ ನಾವು ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ,ನಮಗೆ ಸ್ವಂತ ಜಮೀನು ಇಲ್ಲ , ನಿವೇಶನ ಕೇಳಿದರೆ ಕಳೆದ ಐದು ವರ್ಷಗಳಿಂದ ಇಂದು , ನಾಳೆ ಎಂದು ಸತಾಯಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಸರ್ಕಾರದ ಗೃಹಭಾಗ್ಯ ಯೋಜನೆಯನ್ನು ಜಾರಿ ಮಾಡದ ಹಾಗೂ ನಿವೇಶನ ನೀಡದ ಬಗ್ಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ ರಾಜೇಶ್ ಹಾಗೂ ಆಡಳಿತಾಧಿಕಾರಿ , ತಹಶೀಲ್ದಾರ್ ಎಸ್.ಎನ್ ನರಗುಂದ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ನಿರ್ಲಕ್ಷ್ಯತೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು. ತಿಂಗಳಲ್ಲಿ ಕೇವಲ ಒಂದು ಸೋಪ್ ಮಾತ್ರ ನೀಡುವ ಕುರಿತು ಮತ್ತೆ ತಮ್ಮ ಅಸಮಾಧಾನವನ್ನು ಅಧ್ಯಕ್ಷರು ವ್ಯಕ್ತಪಡಿಸಿದ ಅವರು ಇನ್ನೊಮ್ಮೆ ಇಂತಹ ಪ್ರಕರಣ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದರು.
ಕಾನೂನು ಬಾಹಿರವಾಗಿ ಪಟ್ಟಣ ಪಂಚಾಯತ್ ಸದಸ್ಯೆಯ ಗಂಡನನ್ನು ಸ್ಯಾನಿಟೈಜರ್ ಗುಮಾಸ್ತನನ್ನು ನೇಮಕ ಮಾಡಿರುವ ಬಗ್ಗೆ ಮಾಹಿತಿ ತಿಳಿದುಕೊಂಡ ಅಧ್ಯಕ್ಷರು ತಕ್ಷಣ ಆತನನ್ನು ಸೇವೆಯಿಂದ ಕೈಬಿಟ್ಟು ಅರ್ಹತೆ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಲು ಮುಖ್ಯಾಧಿಕಾರಿಗೆ ಸೂಚಿಸಿದರು. ಪಟ್ಟಣ ಪಂಚಾಯತ್ ನ ಸ್ವಚ್ಚತಾ ವಾಹನ ಹಾಗೂ ಶೌಚಾಲಯ , ಡ್ರೈನೇಜ್ ಸ್ವಚ್ಚತಾ ವಾಹನಗಳ ಚಾಲಕರು ತಮ್ಮ ಸಮಸ್ಯೆಗಳನ್ನು ಅಧ್ಯಕ್ಷರಲ್ಲಿ ತೋಡಿಕೊಂಡರು.
ಗ್ರಾಮ ಪಂಚಾಯತ್ ಗಳಲ್ಲಿ ದುಡಿಯುತ್ತಿರುವ ಸ್ವಚ್ಚತಾ ಕಾರ್ಮಿಕರಿಗೆ ತಿಂಗಳಿಗೆ 12-13 ದಿನ ಕೆಲಸ ನೀಡಿ ಕೇವಲ ನಾಲ್ಕೈದು ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ , ಇಎಸ್ಐ , ಪಿಎಫ್ , ಆರೋಗ್ಯ ವಿಮೆ ಸೇರಿದಂತೆ ಯಾವುದೇ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿಲ್ಲ , ಸ್ವಚ್ಚತಾ ಕಾರ್ಮಿಕರ ನೆಮ್ಮದಿ ಬದುಕಿಗೆ ಕಾನೂನುಬದ್ಧ ವೇತನ ಹಕ್ಕನ್ನು ಜಾರಿಗೊಳಿಸಲು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ತಾ.ಪಂ ಸಹಾಯಕ ನಿರ್ದೇಶಕ (ಆಡಳಿತ) ಗಣೇಶ್ ಶೆಟ್ಟಿ ಹಾಗೂ ಸ್ವಚ್ಛ ಭಾರತ್ ಮಿಷನ್ ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಯವನ್ನು ಸರ್ಕಾರದ ನಿಯಮಾವಳಿಗಳಂತೆ ಸಂಜೀವಿನಿ ಒಕ್ಕೂಟ ನಿರ್ವಹಿಸುತ್ತಿದೆ. ದುಡಿಯುತ್ತಿರುವ ಕಾರ್ಮಿಕರಿಗೆ ಸಂಜೀವಿನಿ ಒಕ್ಕೂಟದವರೇ ವೇತನ ನೀಡುತ್ತಾರೆ ಎಂದರು. ಮಧ್ಯೆ ಪ್ರವೇಶಿಸಿದ ಶೇಖರ್ ಲಾಯಿಲ ತಾಲೂಕಿನ ಬಹುತೇಕ ವೇಣೂರು ಗ್ರಾಮ ಪಂಚಾಯತ್ ನಲ್ಲಿ 3-4 ತಿಂಗಳ ಹಿಂದೆ ಸ್ವಚ್ಚತಾ ಕಾರ್ಮಿಕರಿಗೆ 11700 ರೂಪಾಯಿ ವೇತನ ನೀಡಲಾಗುತ್ತಿತ್ತು. ಇದೀಗ ಸಂಜೀವಿನಿ ಒಕ್ಕೂಟದಿಂದ ಅದೇ ಕಾರ್ಮಿಕರಿಗೆ ಕೇವಲ 7000 ರೂಪಾಯಿ ವೇತನ ನೀಡಲಾಗುತ್ತಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಸ್ವಚ್ಚತಾ ಕಾರ್ಮಿಕರ ವೇತನ ಪರಿಷ್ಕರಣೆಯಾಗದಿದ್ದರೆ ಜೀವನ ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ಆಯೋಗದ ಅಧ್ಯಕ್ಷರು ಮಾತನಾಡುತ್ತಾ ಇದು ಸರ್ಕಾರದ ಮಟ್ಟದಲ್ಲಿ ಸ್ವಚ್ಚತಾ ಕಾರ್ಮಿಕರ ಕಾನೂನಿನ ಅಮೂಲಾಗ್ರ ಬದಲಾವಣೆ ಮಾಡಲು ಮುಖ್ಯಮಂತ್ರಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದರು.
13 ವರ್ಷಗಳಿಂದ ದುಡಿಯುತ್ತಿರುವ ನನ್ನನ್ನು ಕಡೆಗಣಿಸಿ ಬೇರೆಯವರನ್ನು ಪಂಚಾಯತ್ ಸಿಬ್ಬಂದಿ ಎಂದು ಜಿಲ್ಲಾ ಪಂಚಾಯತ್ ಗೆ ಕಳುಹಿಸುವ ಮೂಲಕ ನನಗೆ ಅನ್ಯಾಯ ಮಾಡಲಾಗಿದೆ ಎಂದು ಧರ್ಮಸ್ಥಳ ಪಂಚಾಯತ್ ನ ದಿನೇಶ್ ತನ್ನ ನೋವು ತೋಡಿಕೊಂಡರು. ಡ್ರೈವರ್ ಮತ್ತು ಲೋಡರ್ ಆಗಿ ನಾನೊಬ್ಬಳೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಕುಕ್ಕೇಡಿ ಪಂಚಾಯತ್ ನ ರೇಣುಕಾ ಹೇಳಿದರು. ವೇಣೂರು ಪಂಚಾಯತ್ ನಲ್ಲಿ ದುಡಿಯುತ್ತಿದ್ದ ಶೀನ ಅವರನ್ನು ಯಾವುದೇ ಕಾರಣ ನೀಡದೆ ಕೆಲಸದಿಂದ ಕೈಬಿಡಲಾಗಿದೆ ಎಂದರು. ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿದ ಅಧ್ಯಕ್ಷರು ಸ್ವಚ್ಚತಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ , ತಹಶೀಲ್ದಾರ್ ಎಸ್.ಎನ್ ನರಗುಂದ , ಮುಖ್ಯಾಧಿಕಾರಿ ರಾಜೇಶ್ ಕೆ , ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಧನಂಜಯ , ತಾ.ಪಂ ಸಹಾಯಕ ನಿರ್ದೇಶಕ(ಆಡಳಿತ) ಗಣೇಶ್ ಶೆಟ್ಟಿ , ಸ್ವಚ್ಛ ಭಾರತ್ ಮಿಷನ್ ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ ಉಪಸ್ಥಿತರಿದ್ದರು.


