ಮಂಗಳೂರು: ಸಿಪಿಐ ಸಮ್ಮೇಳನದ ಬ್ಯಾನರ್ ಹರಿದ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಳ್ಳಾಲ ವಲಯ ಸಿಪಿಐ (ಎಂ)ಸಮ್ಮೇಳನದ ಸ್ವಾಗತ ಸಮಿತಿ ಆಗ್ರಹಿಸಿದೆ.
ಉಳ್ಳಾಲ ವಲಯ ವ್ಯಾಪ್ತಿಯಲ್ಲಿ ಅ.17ರಂದು ನಡೆಯಲಿರುವ 23ನೆ ಉಳ್ಳಾಲ ವಲಯ ಸಿಪಿಐ(ಎಂ) ಸಮ್ಮೇಳನದ ಸ್ವಾಗತ ಸಮಿತಿ ವಿವಿಧ ಕಡೆಗಳಲ್ಲಿ ಸಮ್ಮೇಳನದ ಪ್ರಚಾರ ಮತ್ತು ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಬ್ಯಾನರ್ ಹಾಗೂ ಪಕ್ಷದ ಧ್ವಜಗಳನ್ನು ಅಳವಡಿಸಲಾಗಿತ್ತು.ಈ ಪೈಕಿ ತಲಪಾಡಿಯ ನಾರ್ಲ, ಪಡೀಲು, ಸೋಮೇಶ್ವರ ಗ್ರಾಮದ ಪಿಲಾರು ಲಕ್ಷ್ಮಿಗುಡ್ಡೆ, ಕೊಣಾಜೆ ಅಸೈಗೋಳಿ ಪರಿಸರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ಹರಿದು ಕೆಲವು ಕಡೆಗಳಲ್ಲಿ ಧ್ವಜಗಳನ್ನು ನಾಶಮಾಡಿದ್ದಾರೆ.
ಸಿಪಿಐಎಂ ಉಳ್ಳಾಲ ವಲಯ ಸಮಿತಿ, ಹಾಗೂ ಉಳ್ಳಾಲ ವಲಯದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಜನ ವಾದಿ ಮಹಿಳಾ ಸಂಘಟನೆ, ಕೋಟೆಕಾರ್ ಸರ್ಕಲ್ ರೈತ ಸಂಘ, ಪಿಲಾರು ಡಿವೈಎಫ್ಐ ಪಿಲಾರು ಘಟಕ ಘಟನೆಯನ್ನು ಖಂಡಿಸಿ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿವೆ.