ಬೆಳ್ತಂಗಡಿ : ಬೆಂಗಳೂರಿನಿಂದ ಧರ್ಮಸ್ಥಳದ ಜೋಡುಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಜೋಡುಸ್ಥಾನದಲ್ಲಿರುವ ಬಾಲಕೃಷ್ಣ ಎಂಬವರ ಅಂಗಡಿಯ ಬಳಿ ಸುಮಾರು 5-6 ತಿಂಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ವಸಂತಲಾ ಬಾಯ್(48) ಎಂಬವರು ತಿರುಗಾಡುತ್ತಾ ಅಲ್ಲೇ ಅಕ್ಕಪಕ್ಕ ಮಲಗಿಕೊಂಡಿದ್ದರು. ದಿನಾಂಕ 27-6-2022 ರಂದು ಅನಾರೋಗ್ಯದಿಂದ ಮಲಗಿಕೊಂಡಿದ್ದು ಸ್ಥಳೀಯರು ಸೇರಿ 108 ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಮಹಿಳೆ ಬ್ಯಾಗ್ ನಲ್ಲಿ ಬೆಂಗಳೂರು ಜಿಲ್ಲೆಯ ಕಾಮಾಕ್ಷಿಪಾಳ್ಯದ ಹೊಸ ಸ್ಟ್ರೀಟ್ ನಿವಾಸದ ಐಡಿ ಕಾರ್ಡ್ ಪತ್ತೆಯಾಗಿದ್ದು ಧರ್ಮಸ್ಥಳ ಪೊಲೀಸರು ಮನೆಯವರನ್ನು ಸಂಪರ್ಕ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.