ಬೆಂಗಳೂರು: ಕುಂದಲಹಳ್ಳಿ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟು ಹೋಗಿರುವುದು ತಿಳಿದುಬಂದಿದೆ. ಇದು ಉಗ್ರರು ಮಾಡಿರುವ ಬಗ್ಗೆ ಇನ್ನೂ ಗೊತ್ತಿಲ್ಲ. ಇದೊಂದು ಸುಧಾರಿತ ಸ್ಫೋಟಕದ ಪ್ರಕರಣವಾಗಿದೆ ಭಾರಿ ಪ್ರಮಾಣದಲ್ಲೇನೂ ನಡೆದಿಲ್ಲ. ಸಣ್ಣ ಪ್ರಮಾಣದಾದ್ದರೂ ಅದು ಪರಿಣಾಮಕಾರಿಯಾಗಿದೆಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದರು.
‘ಮಂಗಳೂರಲ್ಲಿ ಇಂತಹ ಘಟನೆ ನಡೆದಿತ್ತು. ಬಿಜೆಪಿ ಸರ್ಕಾರದಲ್ಲೂ ಹಲವು ಸ್ಫೋಟಗಳು ನಡೆದಿದ್ದವು. ನಮ್ಮ ಸರ್ಕಾರದಲ್ಲಿ ಇದೇ ಮೊದಲ ಘಟನೆಯಾಗಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಅಲ್ಲಿ ಸ್ಫೋಟ ಆಗಿರುವುದು ಸತ್ಯವಾಗಿದೆ. ಕಾರಣವಾದವರ ವಿರುದ್ಧ ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕಾರಣ ಮಾಡಬಾರದು, ತನಿಖೆಗೆ ಸಹಕಾರ ಕೊಡಬೇಕು’ ಎಂದು ತಿಳಿಸಿದರು.
ಇನ್ನು ವ್ಯಕ್ತಿಯೊಬ್ಬ ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಪರಿಹಾರ ವಿಚಾರ ಈ ಕುರಿತು ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ಹೋಗುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಸಂಪೂರ್ಣ ಮಾಹಿತಿ ಸಿಕ್ಕ ಮೇಲೆ ತಿಳಿಸುತ್ತೇನೆ’ ಎಂದರು.