ಕಲ್ಲಡ್ಕ: ರಾಜ್ಯ ರಾಜಧಾನಿಯಾದ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.
ಈ ರಸ್ತೆಯಲ್ಲಿ ಸಂಚಾರಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರು ದಿನನಿತ್ಯ ಟ್ರಾಫಿಕ್ ನಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಹಾಗೂ ಮಂಗಳೂರು ನಗರವನ್ನು ಸಂಪರ್ಕಿಸುವ ಪ್ರದಾನ ರಸ್ತೆ ಈದಾಗಿದ್ದು, ಈ ಭಾಗದಲ್ಲಿ ಪ್ಲೈ ಓವರ್ ಕಾಮಗಾರಿ ಆರಂಭಗೊಂಡಾಗ ಇಲ್ಲಿದ್ದ ಹಳೆಯ ರಸ್ತೆಯನ್ನು ಸಂಪೂರ್ಣವಾಗಿ ಬದಲಿಸಿ ರಸ್ತೆಗೆ ಡಾಂಬರೀಕರಣವನ್ನು ಮಾಡಲಾಗಿತ್ತು. ಆದರೆ ಈ ರಸ್ತೆಯ ಡಾಂಬರ್ ಕಳಪೆ ಮಟ್ಟದಾಗಿದ್ದರಿಂದ ಪ್ರಸ್ತುತ ರಸ್ತೆಯೇ ಇಲ್ಲದಂತಾಗಿದೆ. ಇದರಿಂದಾಗಿ ರಸ್ತೆ ಹಾಗೂ ಇಡೀ ಕಲ್ಲಡ್ಕ ಪೇಟೆಯಲ್ಲಿ ನೀರು ನಿಂತಿದ್ದು ರಸ್ತೆಯ ಸ್ಥಿತಿ ಶೋಚನಿಯವಾಗಿದೆ.
ಇನ್ನು ಬಿಸಿರೋಡ್ ಹೆದ್ದಾರಿವರೆಗೆ ಚತುಸ್ಪದ ಕಾಮಗಾರಿಯು ಬೇಸಿಗೆಯಲ್ಲಿ ಆರಂಭಗೊಂಡಿತ್ತು. ಆದರೆ ಕಾಮಗಾರಿಯೂ ಸಂಪೂರ್ಣವಾಗಿ ಆಗದೆ ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಗುಂಡಿ, ರಸ್ತೆ ತುಂಬ ನೀರು, ಚರಂಡಿ, ಗುಡ್ಡಗಳು ಜರಿದ ರಸ್ತೆಗಳು, ಹೀಗೆ ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇದೆ.
ಇದರಿಂದಾಗಿ ಪಾಣೆಮಂಗಳೂರಿನಿಂದ ಸೂರಿಕುಮೇರುವರೆಗೆ ಪ್ರತಿನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಜಲೈ 8 ಶುಕ್ರವಾರದಂದು ಇದೇ ರಸ್ತೆಯಲ್ಲಿ ಕೆರೆಯಂತೆ ಹೊಂಡವೊಂದು ಬಾಯ್ದೆರೆದು ನಿಂತಿತ್ತು. ಇದರಿಂದಾಗಿ ಸತತ ಮೂರು ಗಂಟೆಗಳ ಕಾಲ ಟ್ರಾಪಿಕ್ ಜಾಮ್ ಉಂಟಾಗಿದ್ದು, ಈ ಘಟನೆಯಿಂದ ಎಚ್ಚೆತ್ತ ರಸ್ತೆಯ ಗುತ್ತಿಗೆ ವಹಿಸಿಕೊಂಡಿದ್ದ ಕಂಪೆನಿ ಹೊಂಡಕ್ಕೆ ಶೀಘ್ರವಾಗಿ ಪರಿಹಾರವು ಒದಗಿಸಿತ್ತು. ಒಟ್ಟಾರೆಯಾಗಿ ಈ ರಸ್ತೆಯಿಂದ ಸ್ಥಳೀಯರು, ಪ್ರಯಾಣಿಕರು ದಿನನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ.