ಮಂಗಳೂರು: ರೈಲಿನಲ್ಲಿ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಜಯಲಕ್ಷ್ಮಿ ಎಂಬವರು ಊರಿನಲ್ಲಿ ಕಾರ್ಯಕ್ರಮ ಇದ್ದ ಕಾರಣ ತನ್ನ ಮೊಮ್ಮಗಳೊಂದಿಗೆ ಮುಂಬೈಯಿಂದ ರೈಲಿನಲ್ಲಿ ಬಂದಿದ್ದು, ರೈಲಿನ ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಿ ಹಿಂದಿರುಗಿ ಬಂದು ನೋಡುವಾಗ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿದೆ ಎನ್ನಲಾಗಿದೆ.
ಕೂಡಲೇ ಅವರು ಸಹ ಪ್ರಯಾಣಿಕರನ್ನು ವಿಚಾರಿಸಿದಾಗ ಓರ್ವ ಬ್ಯಾಗ್ ಹಿಡಿದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ವಿಜಯಲಕ್ಷ್ಮಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಬ್ಯಾಗ್ ನಲ್ಲಿ ಮೊಬೈಲ್ ಫೋನ್, ಚಿನ್ನದ ಎರಡು ಬಳೆಗಳು, 8 ಗ್ರಾಂ ತೂಕದ ಉಂಗುರಗಳು, 24 ಗ್ರಾಂ. ತೂಕದ ಚಿನ್ನದ ಸರ ಸೇರಿದಂತೆ ಒಟ್ಟು 3.65 ಲಕ್ಷ ರೂ. ಮೌಲ್ಯದ ವಸ್ತು ಕಳವಾಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.