ಮಂಗಳೂರು: ಇಲ್ಲಿನ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಕಡಲಾಮೆ ಮೊಟ್ಟೆಗಳಿಂದ ಆಮೆ ಮರಿಗಳು ಬುಧವಾರದಂದು ಹೊರಬಂದಿದ್ದು, ಆಮೆ ಮರಿಗಳು ಸುರಕ್ಷಿತವಾಗಿ ಕಡಲ ಒಡಲನ್ನು ಸೇರಿವೆ.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ‘ಒಟ್ಟು 113 ಮೊಟ್ಟೆಗಳಲ್ಲಿ 88 ಮರಿಗಳು ಹೊರಬಂದಿವೆ. ಅಲ್ಲಿ ಕಡಲಾಮೆ ಮೊಟ್ಟೆ ಇಟ್ಟಿದ್ದು 2023ರ ಡಿ.31ರಂದು ಮುಂಜಾನೆ ಪತ್ತೆಯಾಗಿತ್ತು. ಅಲ್ಲಿ ಒಟ್ಟು 113 ಮೊಟ್ಟೆಗಳಿದ್ದವು. ಇನ್ನು ಕಡಲಾಮೆ ಮೊಟ್ಟಗಳಿಂದ ಸಾಮಾನ್ಯವಾಗಿ 53 ರಿಂದ 55 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಸಸಿಹಿತ್ತುವಿನಲ್ಲಿ ಒಟ್ಟು 12 ಕಡೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಮರಿಗಳು ಹೊರಗೆ ಬಂದಿದ್ದು ಇದೇ ಮೊದಲು. ಇಲ್ಲಿ ಇನ್ನೊಂದು ಜಾಗದಲ್ಲಿರುವ ಮೊಟ್ಟೆಗಳಿಂದ ಮರಿಗಳು ಒಂದು ವಾರ ಬಿಟ್ಟು ಹೊರಗೆ ಬರುವ ನಿರೀಕ್ಷೆ ಇದೆ,’ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್, ‘ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ತುವಿನಲ್ಲಿ 12 ಕಡೆ ಹಾಗೂ ಇತರ ಮೂರು ಕಡೆ ಸೇರಿ ಒಟ್ಟು 15 ಕಡೆ ಕಡಲಾಮೆಯ ಮೊಟ್ಟೆಗಳನ್ನು ಈ ವರ್ಷ ಸ್ಥಳೀಯರ ನೆರವಿನಿಂದ ಪತ್ತೆಹಚ್ಚಲಾಗಿದೆ. ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ,’ ಎಂದರು.