ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ತಾಯಾನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೀಗ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.
ಏಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ ಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಬಳಿಕ ಮೂರು ಆನೆಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಆದ್ರೆ ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ.
ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು . ಬಳಿಕ ಆನೆ ತಜ್ಞರ ಅಭಿಪ್ರಾಯದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕೊಂಡುಯೊಯ್ಯಲಾಗಿತ್ತು. ಶಿಬಿರದಲ್ಲಿ ಈ ಮರಿಯಾನೆಯು ಚುರುಕಾಗಿದ್ದು ಹಾಲು ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಬೆರೆಯುತ್ತಿತ್ತು. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.