ಚಿಕ್ಕಬಳ್ಳಾಪುರ : ಒಂದೆಡೆ ಕೇರಳ, ಮಹಾರಾಷ್ಟ್ರ, ಹಿಮಾಚಲಪ್ರದೇಶ ಹಾಗೂ ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ ಉಂಟಾಗಿದೆ. ರಾಜ್ಯದಲ್ಲೂ ದಕ್ಷಿಣ ಕನ್ನಡ ಸೇರಿದಂತೆ ಅನೇಕ ಕಡೆಯಲ್ಲಿ ಕಾಗೆಗಳು ಅನುಮಾನಾಸ್ಪದವಾಗಿ ಸತ್ತು ಬಿದ್ದಿರುವುದು ವರದಿಯಾಗಿದೆ. ಇದರ ಬೆನ್ನಲ್ಲೇ, ಚಿಕ್ಕಬಳ್ಳಾಪುರದ ಅರಣ್ಯ ಪ್ರದೇಶದಲ್ಲಿ ಹಿಂಡು ಹಿಂಡು ಕೋಳಿ ಮರಿಗಳು ಕಂಡು ಬಂದಿವೆ. ಇಂತಹ ಫಾರಂ ಕೋಳಿ ಮರಿಗಳನ್ನು ಕಂಡ ಜನರು, ಮರಿಗಳನ್ನು ತೆಗೆದುಕೊಂಡು ಹೋಗಲು ಮುಗಿ ಬಿದ್ರು.
ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆಯ ರೈತರು ಹಾಗೂ ಫಾರಂ ಕೋಳಿ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಜಗಳ ತಾರಕಕ್ಕೆ ಏರಿದೆ. ಪರವಾನಿಗೆ ರಹಿತವಾಗಿ ಬರುವ ವಾಹನಗಳನ್ನು ತಡೆಯುತ್ತಿರುವಂತ ರೈತರು, ಫಾರಂ ಕೋಳಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಇದನ್ನು ನೋಡಿದಂತ ಜನರು ನಾ ಮುಂದು, ತಾ ಮುಂದು ಎನ್ನುವಂತೆ ಸಿಕ್ಕ ಸಿಕ್ಕ ಬ್ಯಾಗ್, ಚೀಲ, ಪ್ಲಾಸ್ಟಿಕ್ ಕವರ್ ಸೇರಿದಂತೆ ಅನೇಕ ವಸ್ತುಗಳಲ್ಲಿ ಫಾರಂ ಕೋಳಿ ಮರಿಗಳನ್ನು ತುಂಬಿಕೊಂಡು ಮನೆಗೆಕೊಂಡೊಯ್ಯುತ್ತಿರುವುದು ಕಂಡು ಬಂದಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಕಣಿತಹಳ್ಳಿ ಗ್ರಾಮದ ಅರಣ್ಯದ ಬಳಿ ಹೀಗೆ ಫಾರಂ ಕೋಳಿ ಮರಿಗಳ ರಾಶಿ ರಾಶಿ ಹಿಂಡೇ ಕಂಡು ಬಂದಿದ್ದು, ಇಂತಹ ಮರಿಗಳನ್ನು ಕಂಡ ಜನರು ಅಚ್ಚರಿ ವ್ಯಕ್ತ ಪಡಿಸಿದ್ದಲ್ಲದೇ, ಸಿಕ್ಕ ಪಕ್ಕಸಟ್ಟೆ ಫಾರಂ ಕೋಳಿ ಮರಿಗಳನ್ನು ತುಂಬಿಕೊಂಡು ಮನೆಗೆ ಕೊಂಡೊಯ್ದಿದ್ದಾರೆ.