ಮಂಗಳೂರು: ಹಲವು ಜಾತಿ, ಭಾಷೆ, ಪ್ರಾಂತ್ಯ, ನಾಗರಿಕತೆ ಇರುವ ಮಹಾನ್ ರಾಷ್ಟ್ರ ಭಾರತ. ಏಕತೆ ಮೂಲಕ ಸ್ವಾತಂತ್ರ್ಯ ಗಳಿಸಿ ಮುನ್ನಡೆಯುತ್ತಿರುವ ದೇಶದ ಬಹತ್ವ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದರು.
ಮಂಗಳೂರು ನಗರದ ಬೋಳಾರದ ಶಾದಿ ಮಹಲ್ ಸಭಾಂಗಣದಲ್ಲಿ ಮಂಗಳವಾರ ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಧರ್ಮ, ದೇಶ ಭಕ್ತಿ ಹೆಸರಲ್ಲಿ ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತಿ ತಪ್ಪು ದಾರಿಗೆ ಎಳೆಯುತ್ತಿರುವ ಕಾರಣದಿಂದಲೇ ದ. ಕ., ಉಡುಪಿ ಜಿಲ್ಲೆಗಳು ಇಂದು ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಬದಲಿಗೆ 20ರ ನಂತರದ ಸ್ಥಾನಕ್ಕೆ ಕುಸಿದಿವೆ. ಹಿಂದೆ ಎಸ್ಸೆಸ್ಸೆಲ್ಸಿ, ಪಿಯು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮುಂಚೂಣಿಯಲ್ಲಿದ್ದವು. ಈಗ ನಕಲಿ ದೇಶ ಭಕ್ತರು ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ದೇಶದ ಉನ್ನತಿಗಾಗಿ ಮತ್ತೆ ಶಿಕ್ಷಣಕ್ಕೆ ಆದ್ಯತೆ ನೀಡಿ ಮರಳಿ ನಂ.1 ಸ್ಥಾನಕ್ಕೆ ಕರಾವಳಿ ಜಿಲ್ಲೆಗಳನ್ನು ಕೊಂಡೊಯ್ಯಬೇಕಿದೆ ಎಂದರು.
ದೇಶದ ಅಲ್ಪಸಂಖ್ಯಾತರ ಮೇಲಿನ ದಾಳಿ ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ದಲಿತ ಮೇಲೆ ಅತ್ಯಾಚಾರ ನಡೆಸಿದರೆ ಅದು ಸಂವಿಧಾನದ ಮೇಲಿನ ಅತ್ಯಾಚಾರ. ಏಕೆಂದರೆ ಜಾತಿ, ಧರ್ಮವೆನ್ನದೆ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸರಿ ಸಮಾನವಾದ ಹಕ್ಕನ್ನು ಸಂವಿಧಾನ ನೀಡಿದೆ. ಇಲ್ಲಿ ಒಬ್ಬರಿಗೆ ಅನ್ಯಾಯವಾದರೂ ಅದು ಅನ್ಯಾಯವೇ ಎಂದರು.ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ರಂಥ ಅನೇಕ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಬಳಿ ಕ್ಷಮೆ ಕೋರದೆ ಗಲ್ಲಿಗೇರಿದ್ದಾರೆ. ಸತ್ಯ, ಅಹಿಂಸೆ, ಸರ್ವ ಧರ್ಮ ಸಮಭಾವದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆಯೇ ಹೊರತು ಸಂಕುಚಿತ ಮನೋಭಾವಗಳಿಂದಲ್ಲ. ಈ ಹೋರಾಟದಲ್ಲಿ ಎಲ್ಲ ಧರ್ಮದವರು ಪಾಲ್ಗೊಂಡಿದ್ದಾರೆ. ಈಗಲೂ ಇಂಡಿಯಾ ಗೇಟ್ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಹೆಸರು ಬರೆದಿಟ್ಟಿದ್ದಾರೆ, ಹೋಗಿ ನೋಡಲಿ ಎಂದರು.