ಬೆಳ್ತಂಗಡಿ : ಉಜಿರೆ ಮುಖ್ಯ ರಸ್ತೆಯಲ್ಲಿರುವ ಆನಂದ ಅಚಾರಿಯವರ ಮಾಲಕತ್ವದ ಶ್ರೀ ಶಾರದಾ ಜ್ಯೂವೆಲರ್ಸ್ ಗೆ ನಿನ್ನೆ ತಡ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಜ್ಯೂವೆಲರ್ಸ್ ನ ಚಿನ್ನಾಭರಣಗಳಿರುವ ರೂಂ ನ ಹೊರಗಡೆಯಿಂದ ಗಟ್ಟಿಯಾದ ಕಬ್ಬಿಣದ ಕಪಾಡು ಮಾಡಿ ಭದ್ರತೆ ಮಾಡಿದ್ದರಿಂದ ಯಾವುದೇ ಚಿನ್ನಾಭರಣ ವಸ್ತುಗಳನ್ನು ಕಳ್ಳತನ ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಜ್ಯೂವೆಲರ್ಸ್ ನ ಹಿಂಬದಿಯಲ್ಲಿರುವ ನಿಧಿ ಸ್ಟೋರ್ ಗೆ ಸೇರಿದ ಗೋಡೌನ್ ನ ಮೇಲ್ಭಾಗದ ತಗಡಿನ ಶೀಟ್ ಜಾರಿಸಿ ಒಳನುಗ್ಗಿದ ಕಳ್ಳರು ನಂತರ ಜ್ಯೂವೆಲರ್ಸ್ ಪಕ್ಕದ ಅಂಗಡಿಯ ಸಂಜೀವ ಗೌಡರ ಮಾಲಕತ್ವದ ಧನ್ವಂತರಿ ಅಯುರ್ವೆಧಿಕ್ ಮೇಡಿಕಲ್ ಶಾಪ್ ನ ಗೋಡೆ ಕೊರೆದು ಶ್ರೀ ಶಾರದಾ ಜ್ಯುವೆಲರ್ಸ್ ಗೆ ನುಗ್ಗಿದ್ದಾರೆ.
ಬೆಳಗ್ಗೆ ಎಂದಿನಂತೆ ಅಂಗಡಿ ತೆರೆಯಲು ಬಂದ ಮಾಲಕರು ಕಳ್ಳತನದ ಮಾಹಿತಿಯನ್ನು ತಿಳಿದು ಉಜಿರೆಯ ಉದ್ಯಮಿ ರವಿಚಂದ್ರ ಚಕ್ಕಿತ್ತಾಯ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.