ನೆಲ್ಯಾಡಿ: ಕಡಬ ತಾಲೂಕಿನ ಇಚ್ಚಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದ ಎಸ್.ಎಂ.ಔತಾಡ್ ಕಂಪನಿಯವರಿಗೆ ಸೇರಿದ ಅಂದಾಜು 1.10 ಲಕ್ಷ ರೂ. ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಪಿಕಪ್ ವಾಹನವೊಂದರಲ್ಲಿ ತುಂಬಿಸಿ ಕಳವಿಗೆ ಮುಂದಾಗಿದ್ದ ಘಟನೆ ನಡೆದಿದೆ.
ಪೆರಿಯಶಾಂತಿಯಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿಯಲ್ಲಿ ಎಸ್.ಎಂ.ಔತಾಡ್ ಕಂಪನಿಯವರು ಕಾಮಗಾರಿ ನಿರ್ವಹಣೆ ಬಳಸುತ್ತಿದ್ದ ಅಂದಾಜು 1.10 ಲಕ್ಷ ರೂ. ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಪಿಕಪ್ ವಾಹನವೊಂದರಲ್ಲಿ ತುಂಬಿಸಿ ಕಳವಿಗೆ ಮುಂದಾಗಿದ್ದ ಕಳ್ಳರು, ಸಂಸ್ಥೆಯ ಸಿಬ್ಬಂದಿ ಬರುತ್ತಿದ್ದಂತೆ ವಾಹನ ಹಾಗೂ ಸೊತ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಘಟನೆಯು ಸುಮಾರು ಬೆಳಗಿನ ಜಾವದಲ್ಲಿ ನಡೆದಿದೆ. ಸುಮಾರು 3-4 ಜನ ಕಳ್ಳರು ಸೊತ್ತುಗಳನ್ನು ಕಳವು ಮಾಡಿ ಕೆಎ 46-7045 ಸಂಖ್ಯೆಯ ಪಿಕ್ ಅಪ್ ವಾಹನಕ್ಕೆ ಲೋಡ್ ಮಾಡಿ ಕಳವು ಮಾಡುತ್ತಿದ್ದು, ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ, ಕಳವು ಮಾಡಿದ ಸೊತ್ತು, 3 ಮೊಬೈಲ್ ಫೋನ್ ಗಳನ್ನು ಮತ್ತು ಕೆಎ21 ಇಎ 4076 ಸಂಖ್ಯೆಯ ದ್ವಿಚಕ್ರ ವಾಹನವನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಎಸ್.ಎಂ.ಔತಾಡ್ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ ಆಗಿರುವ ತೆಲಂಗಾಣ ನಿವಾಸಿ ಸಾಯಿರಾಮ್ ಎಂ. ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.