ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಚಿಕಿತ್ಸೆಗೆ ತುತ್ತಾಗಿರುವ ಬಡಪಾಯಿ ಕುಟುಂಬವನ್ನು ವ್ಯಕ್ತಿಯೋರ್ವ ದೋಚಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪೆರಿಯಡ್ಕಕಿಂಡೋವು ಮನೆ ನಿವಾಸಿ ಶೇಖರ್ ಪೂಜಾರಿ ಎಂಬುವವರ ಮಗ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್, ಕಳೆದ ಜನವರಿ ತಿಂಗಳಲ್ಲಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದರು. ಇವರ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅಗತ್ಯತೆ ಇದ್ದುದರಿಂದ ದಾನಿಗಳ ಸಹಕಾರ ಬಯಸಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿತ್ತು.
ಈ ಮನವಿ ಗಮನಿಸಿದ ಓರ್ವ ವ್ಯಕ್ತಿ ತಾವು ಗುಲ್ಬರ್ಗದ ಪ್ರಖ್ಯಾತ ದರ್ಗಾವೊಂದರ ಸಾಮಾಜಿಕ ಸೇವಾ ಯೋಜನೆಯ ಪದಾಧಿಕಾರಿ ಎಂದು ಪರಿಚಯಿಸಿ ನಿಮ್ಮಸಮಸ್ಯೆಯನ್ನು ಪರಿಶೀಲಿಸಿ ಸಮಾಜದ ಮುಂದೆ ಪ್ರಸ್ತಾಪಿಸಲಾಗಿತ್ತು. ಇದೀಗ 1.98 ಲಕ್ಷ ರೂಪಾಯಿ ಸಂಗ್ರಹಣೆಗೊಂಡಿದೆ. ಈ ಮೊತ್ತ ಪಡೆಯಲು ತಾವು ಖುದ್ದಾಗಿ ಬರುವಿರೋ ಅಥವಾ ನಾವು ಬಂದು ಕೊಡಬೇಕಾ ಎಂದು ತಿಳಿಸಿದ್ದರು.1.98 ಲಕ್ಷದ ದೊಡ್ಡಮೊತ್ತ ಸಿಗುವುದಾದರೆ ಗುಲ್ಬರ್ಗಕ್ಕೆ ಹೋಗುವುದಕ್ಕೆ ಮನಸ್ಸು ಮಾಡಿ, ವಿಚಾರವನ್ನು ಉಪ್ಪಿನಂಗಡಿ ಪಂಚಾಯಿತಿ ಸದಸ್ಯಯುಟಿ ತೌಶಿಫ್ ಅವರ ಗಮನಕ್ಕೆ ತರಲಾಗಿತ್ತು. ದೂರದ ಗುಲ್ಬರ್ಗದ ಸಂಘ ಸಂಸ್ಥೆಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರದ ಅವರು ನಲಪ್ಪಾಡ್ ಹಾಗೂ ಯು.ಟಿ.ಖಾದರ್ ಮೂಲಕ ಗುಲ್ಬರ್ಗದ ಕಾಂಗ್ರೆಸ್ ಮುಂದಾಳು ಸಂಪರ್ಕ ಸಾಧಿಸಿ ಸಂಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಸದ್ರಿ ಸಂಸ್ಥೆಯು ಬಹಳಷ್ಟು ಮಂದಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ ಎಂಬ ವಿಚಾರ ತಿಳಿದಿದೆ.
ಈ ಸಂಸ್ಥೆಯು ಶೇಖರ್ ಪೂಜಾರಿ ಮಗನಿಗೆ ಹಣಕಾಸಿನ ಸಹಾಯ ಒದಗಿಸುವ ಬಗ್ಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ತಿಳಿದು ಬಂದಿದೆ. ಕೂಡಲೇ ಫೋನಾಯಿಸಿದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನಿಗೂ ದರ್ಗಾದ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಖಚಿತವಾಗಿತ್ತು.
ಇದೊಂದು ವಂಚನಾ ತಂಡದ ಕೃತ್ಯ ಎನ್ನುವುದು ಖಚಿತವಾದೊಡನೆ ಆತನಿಗೆ ಖುದ್ದು ಗುಲ್ಬರ್ಗಕ್ಕೆ ಬರಲು ಕಷ್ಟವಾಗುತ್ತಿದೆ. ನೀವು ಕೊಡುವ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿ ಎಂದು ತಿಳಿಸಲಾಯಿತು. ಆಗ ಆ ವ್ಯಕ್ತಿ ನಮ್ಮದೇನೇ ಕೊಡುಗೆ ಇದ್ದರೂ ಹಣ ಪಾವತಿಸುವ ಸ್ವೀಕರಿಸುವ ಪೋಟೋ ದಾಖಲೆ ಬೇಕಾಗಿರುವುದರಿಂದ ನಾವೇ ಬಂದು ನಿಮಗೆ ಹಣ ಕೊಡುತ್ತೇವೆ. ಸದ್ಯ ನೀವು ವಾಹನದ ಪೆಟ್ರೋಲ್ನ 4000 ರೂಪಾಯಿ ಮೊತ್ತವನ್ನು ನನ್ನ ಖಾತೆಗೆ ಫೋನ್ ಪೇ ಮಾಡಿ ಎಂದು ತಿಳಿಸುತ್ತಾನೆ.
ನೀವು ಕೊಡಲು ಉದ್ದೇಶಿಸಿದ 1.98 ಲಕ್ಷ ರು.ಮೊತ್ತದಿಂದಲೇ ನಾಲ್ಕು ಸಾವಿರ ತೆಗೆದುಕೊಂಡು ಬನ್ನಿ ಎಂದು ತಿಳಿಸಿದ ಬಳಿಕ ಪೋನು ಮಾಡುವುದನ್ನೇ ನಿಲ್ಲಿಸಿದ್ದಾನೆ. ಈ ಮೂಲಕ ಹಣ ಲಪಟಾಯಿಸಲು ಪ್ಲಾನ್ ಹೂಡಿದ್ದ ಎಂಬುವುದು ಬಯಲಾಗಿದೆ.