ಮೂಡಬಿದಿರೆ; ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಮೇಲೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಹಾಗೂ ಬಸ್ ಕಂಡೆಕ್ಟರ್ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಯಿ ಎಂಬಲ್ಲಿ ನಡೆದಿದೆ.
ಮುಲ್ಲರಪಟ್ನ ಇಸ್ಹಾಕ್ ಸದ್ಯ ಬಿಸಿರೋಡಿನಲ್ಲಿ ವಾಸವಿರುವ ಇಸ್ಹಾಕ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಬಿ.ಸಿ.ರೋಡ್ ನಿಂದ ಮೂಡಬಿದಿರೆಗೆ ತೆರಳಲೆಂದು ಖಾಸಗಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರ ದಟ್ಟಣೆಯಿದ್ದರಿಂದ ಇಸ್ಹಾಕ್ ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸ್ಹಾಕ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸ್ಹಾಕ್ ಅವರಿಂದ ಬ್ಯಾಗ್ ಪಡೆದು ಬಸ್ಸಿನಿಂದ ಇಳಿದು ಹೋದರೆನ್ನಲಾಗಿದೆ. ಬಳಿಕ ಕಂಡೆಕ್ಟರ್ ಇಸ್ಹಾಕ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿ ಅವರಿಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೆಲವು ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಕೆಲವು ಯುವಕರನ್ನು ಕರೆಸಿ ಇಸ್ಹಾಕ್ ಅವರನ್ನು ಒಪ್ಪಿಸಿದ್ದಾನೆ ಎನ್ನಲಾಗಿದೆ.
ಬಳಿಕ ಗುಂಪು ಇಸ್ಹಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.ಹಲ್ಲೆಯಿಂದ ಇಸ್ಹಾಕ್ ಅವರ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಬಳಿಕ ಗುಂಪು ಇಸ್ಹಾಕ್ ಅವರನ್ನು ಗುಂಪು ಪೊಲೀಸರಿಗೆ ಒಪ್ಪಿಸಿದೆ. ಪೊಲೀಸರು ಇಸ್ಹಾಕ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಇಸ್ಹಾಕ್ ಅವರ ಕುಟುಂಬದವರು ಠಾಣೆಗೆ ಬಂದಿದ್ದು, ಸಂಜೆ 5:30ರವರೆಗೆ ಇಸ್ಹಾಕ್ ಅವರನ್ನು ಠಾಣೆಯಲ್ಲೇ ಕೂರಿಸಲಾಗಿತ್ತು. ಬಳಿಕ ಇಸ್ಹಾಕ್ ಅವರಿಂದ ಹೇಳಿಕೆ ಪಡೆದು ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇದೀಗ ಇಸ್ಹಾಕ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.