ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಿರುವ ಮನೆಗೆ ಏಕಾಏಕಿ ನುಗ್ಗಿದ ಐದು ಮಂದಿ ದುಷ್ಕರ್ಮಿಗಳ ತಂಡ ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಮುಝಮ್ಮಿಲ್ (19) ಎಂಡೋಸಲ್ಫಾನ್ ಸಂತ್ರಸ್ತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವನಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯನ್ನು ಆತನ ತಾಯಿ ಮೈಮುನ (38) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಐದು ಮಂದಿ ದುಷ್ಕರ್ಮಿಗಳ ಗುಂಪು ಒಂಟಿ ಮಹಿಳೆ ಹಾಗೂ ಎಂಡೋಸಲ್ಫಾನ್ ಪೀಡಿತ ಮಗ ವಾಸವಿರುವ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಸಂದರ್ಭದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಗ ಬೊಬ್ಬೆಹಾಕಿ ಅಡ್ಡ ಬಂದಾಗ ಮಗನಿಗೂ ಮನಬಂದಂತೆ ಥಳಿಸಿದ್ದರು ಎನ್ನಲಾಗಿದೆ.
ಆರೋಪಿಗಳ ಪೈಕಿ ಓರ್ವನನ್ನು ಉಪ್ಪಿನಂಗಡಿಯ ಕೂಟೇಲು ಸಮೀಪದ ಮಹಮ್ಮದ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಅಪರಿಚಿತರು ಎನ್ನಲಾಗಿದೆ.ಸಂತ್ರಸ್ತ ಮಹಿಳೆ ಹಾಗೂ ಹಲ್ಲೆಗೊಳಗಾದ ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ದಿನಾಂಕ 24.08.2023ರಂದು ಸಂಜೆ 4.30ರ ಸಮಯ ಮಹಮ್ಮದ್ ಕೂಟೇಲು ಎಂಬಾತ ಇತರ ಐದರಿಂದ ಆರು ಮಂದಿ ಮುಖ ಪರಿಚಯ ಇರುವ ಅಪರಿಚಿತರ ತಂಡದೊಂದಿಗೆ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿನ ಮೈಮುನ ಎಂಬವರ ಮನೆಯೊಳಗೆ ಕತ್ತಿ,ದೊಣ್ಣೆ, ಮರದ ತುಂಡು ಮಾರಕಾಸ್ತ್ರದೊಂದಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಆದ ಮೈಮುನ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಮೈಮುನ ಅವರು ಧರಿಸಿದ ಬಟ್ಟೆಯನ್ನು ಹರಿಯಲು ಪ್ರಯತ್ನಿಸಿದಾಗ ಮೈಮುನರ ಎಂಡೋಸಲ್ಫಾನ್ ಪೀಡಿತ ಮಗ ಮುಝಮ್ಮಿಲ್ ಮಧ್ಯ ಪ್ರವೇಶಿಸಿ ತಡೆಯಲು ಮುಂದಾದಾಗ ಮುಝಮ್ಮಿಲ್ ಮಾನಸಿಕ ರೋಗಿ ಎಂದು ತಿಳಿದಿದ್ದರೂ ಮುಝಮ್ಮಿಲನಿಗೆ ಮನಬಂದಂತೆ ಹಲ್ಲೆ ನಡೆಸಿ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಒಬ್ಬಾತ ವೀಡಿಯೋ ರೆಕಾರ್ಡ್ ಮಾಡಿ ಮೈಮುನಾಳರ ಪೋಟೋ, ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ ಅಂತ ಹೇಳಿ ಬೆದರಿಸಿದ್ದಾನೆ ಎನ್ನಲಾಗಿದೆ.