ಮಂಗಳೂರು; ಆಧಾರ್ ಕಾರ್ಡ್ ತೋರಿಸಿಲ್ಲ ಎಂದು ವಿದ್ಯಾರ್ಥಿನಿಯರನ್ನು ನಿರ್ವಾಹಕ ಬಸ್ ನಿಂದ ಇಳಿಸಿದ ಘಟನೆ ಉಳ್ಳಾಲದ ಕುಂಪಲದಲ್ಲಿ ನಡೆದಿದೆ. ಕಂಡಕ್ಟರ್ ಅಮಾನವೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
‘ಮಂಗಳೂರು–ಕುಂಪಲ ನಡುವೆ ಸಂಚರಿಸುವ ಕೆಎಸ್ಆರ್ಟಿಸಿ ನಗರ ಸಾರಿಗೆಯ ಬಸ್ನಲ್ಲಿ ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರು ಶಾಲೆಗೆ ಹೊರಟಿದ್ದರು. ಮಕ್ಕಳು ಆಧಾರ್ ಕಾರ್ಡ್ ತೋರಿಸದ ಹಿನ್ನಲೆ ಬಸ್ನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಅವರು, ‘ಆಧಾರ್ ಕಾರ್ಡ್ ತೋರಿಸದಿದ್ದರೆ ಉಚಿತ ಪ್ರಯಾಣಕ್ಕೆ ನಿಮಗೆ ಅವಕಾಶ ಇಲ್ಲ’ ಎಂದು ಟಿಕೆಟ್ಗೆ ಹಣ ಕೇಳಿದ್ದರು. ಹಣ ನೀಡಿ ಟಿಕೆಟ್ ಪಡೆಯದ ಕಾರಣಕ್ಕೆ ಆ ಹೆಣ್ಣು ಮಕ್ಕಳನ್ನು ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸುವ ಮೂಲಕ ನಿರ್ವಾಹಕ ಅಮಾನವೀಯವಾಗಿ ವರ್ತಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯಕರು ಕುಂಪಲ ಶಾಲೆಯ ಎದುರು ಸಂಜೆ ಅದೇ ಬಸ್ ಅನ್ನು ತಡೆದು ನಿಲ್ಲಿಸಿ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು, ‘ಮಕ್ಕಳ ಜೊತೆ ಮಾನವೀಯವಾಗಿ ವರ್ತಿಸಿದ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.