ಸುಳ್ಯ:ಬಸ್ ನಲ್ಲಿ ವಿದ್ಯಾರ್ಥಿನಿಯೊಡನೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಅನ್ಯಕೋಮಿನ ಯುವಕನ ಮೇಲೆ ಆಕೆಯ ಸಹಪಾಠಿ ವಿದ್ಯಾರ್ಥಿಗಳು ಹಲ್ಲೆ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್ಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಹತ್ತಿದ್ದಳು. ಯುವಕನೊಬ್ಬ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅದರಲ್ಲಿ ಕುಳಿತಳೆನ್ನಲಾಗಿದೆ.ಸ್ವಲ್ಪ ದೂರ ಬರುವಾಗ ಪಕ್ಕದಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸತೊಡಗಿದನೆನ್ನಲಾಗಿದೆ. ಅದನ್ನು ಆಕೆ ವಿರೋಧಿಸಿ ಕಂಡಕ್ಟರ್ ಗೆ ತಿಳಿಸಿದಳು. ಕಂಡಕ್ಟರ್ ಮತ್ತು ಬಸ್ನಲ್ಲಿದ್ದ ಇತರ ಪ್ರಯಾಣಿಕರು ಯುವಕನನ್ನು ಆಕ್ಷೇಪಿಸಿ ತರಾಟೆಗೆತ್ತಿಕೊಂಡರೆಂದು ಎನ್ನಲಾಗಿದೆ.
ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಸಹಪಾಠಿಗಳಿಗೆ ಫೋನ್ ಮಾಡಿ ತಿಳಿಸಿದಳು. ಬಸ್ಸು ಸುಬ್ರಹ್ಮಣ್ಯಕ್ಕೆ ಬಂದಾಗ ಅನುಚಿತವಾಗಿ ವರ್ತಿಸಿದ್ದ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದಿದ್ದು, ವಿದ್ಯಾರ್ಥಿನಿ ಬೆಂಗಳೂರು ಬಸ್ನಲ್ಲೇ ಸುಳ್ಯಕ್ಕೆ ಬಂದಳು. ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದ ಆ ಯುವಕ ಮುಸ್ಲಿಂ ಯುವಕ ಎಂಬುದು ಸಹ ಪ್ರಯಾಣಿಕರಿಗೆ ಗೊತ್ತಾಗಿತ್ತೆನ್ನಲಾಗಿದೆ. ವಿದ್ಯಾರ್ಥಿನಿ ಸುಳ್ಯಕ್ಕೆ ಬರುವುದನ್ನು ಸಹಪಾಠಿ ಯುವಕರು ಸುಳ್ಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಅನುಚಿತ ವರ್ತನೆಗೈದ ಯುವಕ ಬಸ್ ನಲ್ಲಿ ಇರದೇ ಇದ್ದುದರಿಂದ, ಆತ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬರುತ್ತಿರಬೇಕೆಂದು ತಿಳಿದು ಕೆಲವು ಯುವಕರು ಕಾರಲ್ಲಿ ಪೈಚಾರಿಗೆ ಹೋಗಿ ಕಾದರು.
ಆ ಯುವಕ ಕೇರಳದ ಪಲ್ಲಂಗೋಡಿಗೆ ತೆರಳುವವನಾದ ಕಾರಣ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬಂದು ಪೈಚಾರಿನಲ್ಲಿ ಬಸ್ನಿಂದ ಇಳಿದರೆನ್ನಲಾಗಿದೆ. ಕಾದು ಕುಳಿತಿದ್ದ ವಿದ್ಯಾರ್ಥಿಗಳು ಆತ ಪೈಚಾರಲ್ಲಿ ಬಸ್ನಿಂದ ಇಳಿದ ಕೂಡಲೇ ಆತನನ್ನು ಹಿಡಿದು ಕಾರಲ್ಲಿ ಕೂರಿಸಿಕೊಂಡು ಸುಳ್ಯ ಬಸ್ ನಿಲ್ದಾಣಕ್ಕೆ ಕರೆದೊಯ್ದರು. ಆ ವೇಳೆಗೆ ಬಸ್ ನಿಲ್ದಾಣದಲ್ಲಿ ತೊಂದರೆಗೊಳಗಾದ ಆ ವಿದ್ಯಾರ್ಥಿನಿ ಮತ್ತು ಇತರ ಸಹಪಾಠಿಗಳು ಕಾದು ನಿಂತಿದ್ದರು. ಬಸ್ಸ್ಟ್ಯಾಂಡ್ಗೆ ಆತನನ್ನು ಕರೆತಂದ ಕೂಡಲೇ ಎಲ್ಲರೂ ಸೇರಿ ಆತನಿಗೆ ಹೊಡೆದರೆಂದೂ, ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.