ಉಡುಪಿ; ಗ್ಯಾಂಗ್ ಒಂದು ತಲವಾರು, ಬ್ಯಾಟ್, ವಿಕೆಟ್ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕುಂದಾಪುರದ ವಕ್ವಾಡಿಯಲ್ಲಿ ನಡೆದಿದೆ.
ವಕ್ವಾಡಿಯ ಚಂದ್ರಶೇಖರ್(27) ಹಾಗೂ ಅಶೋಕ್ (45) ಗಂಭೀರ ಗಾಯಗೊಂಡವರು. ಸದ್ಯ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಕ್ವಾಡಿಯ ಆದರ್ಶ, ಎಡ್ವರ್ಡ್, ಗಣೇಶ್ ಕುಂಭಾಶಿ, ಗೋವರ್ಧನ್, ಶಶಿಕಾಂತ, ಇಲಿಯಾಸ್, ಪುನೀತ್, ತರುಣ್, ಸುಶಾಂತ್, ಹರ್ಷ, ವಿಘ್ನೇಶ್ ಹಲ್ಲೆ ನಡೆಸಿದ ಆರೋಪಿಗಳು ಎನ್ನಲಾಗಿದೆ. ಈ ಪೈಕಿ ಆದರ್ಶ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು ಪರಾರಿಯಾದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಭಾನುವಾರ ಆರೋಪಿಗಳಾದ ಆದರ್ಶ, ಗೋವರ್ಧನ್, ಗಣೇಶ್, ಎಡ್ವರ್ಡ್ ಸೇರಿದಂತೆ 11 ಯುವಕರ ತಂಡ ವಕ್ವಾಡಿಯಲ್ಲಿ ಬಾರೊಂದರಲ್ಲಿ ಊಟ ಮುಗಿಸಿದ ಬಳಿಕ ಮಾತಿನ ಚಕಮಕಿ ನಡೆದಿತ್ತು. ಬಳಿಕ ಆದರ್ಶ ಎಂಬಾತ ಸುಧಾಕರ ಎಂಬಾತನಿಗೆ ಕರೆ ಮಾಡಿ ವಕ್ವಾಡಿ ಬರಲು ಹೇಳಿದ್ದು, ಅಲ್ಲಿಗೆ ಆಗಮಿಸಿದ ಅಶೋಕ್, ಚಂದ್ರಶೇಖರ್, ಸುಧಾಕರ ಮತ್ತು ವಿಜಯ ಎನ್ನುವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲಿಗೆ ಬಂದ 2 ರಿಕ್ಷಾಗಳ ಮುಂದಿನ ಗ್ಲಾಸ್ ಅನ್ನು ಆರೋಪಿ ಎಡ್ವರ್ಡ್ ತಲ್ವಾರ್ ನಿಂದ ಹೊಡೆದು ಪುಡಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಆದರ್ಶ ಮತ್ತು ಚಂದ್ರಶೇಖರ ನಡುವಿನ ಹಳೆ ವೈಷಮ್ಯದಿಂದ ಆರೋಪಿಗಳು ಸೇರಿ ಕೊಲೆ ಮಾಡುವ ಉದ್ದೇಶದಿಂದ ಅಶೋಕ್ ಹಾಗೂ ಚಂದ್ರಶೇಖರ ಅವರಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.