ಧರ್ಮಸ್ಥಳ; ಕಾರನ್ನು ಅಡ್ಡಗಟ್ಟಿ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಗೆ ಹಲ್ಲೆ ಮಾಡಿರುವ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ.
ರಾತ್ರಿಯ ವೇಳೆ ಬೈಕಿನಲ್ಲಿ ಬಂದ ತಂಡವೊಂದು ಕಾರನ್ನು ಅಡ್ಡಗಟ್ಟಿದೆ. ಬಳಿಕ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಅಬ್ದುಲ್ ಫಾರೂಕ್, ಮೈಮುನಾ, ಸೌಧಾ, ಸಿದ್ದಿಕ್ ಹಾಗೂ ಮಕ್ಕಳು ಉಜಿರೆಯ ಸಂಬಂಧಿಕರ ಮನೆಗೆ ಹೋಗಿ ರಾತ್ರಿ 11.30ರ ಸುಮಾರಿಗೆ ಧರ್ಮಸ್ಥಳಕ್ಕೆ ಹಿಂತಿರುಗುತ್ತಿದ್ದ ವೇಳೆ ಕನ್ಯಾಡಿ ಶಾಲೆಯ ಸಮೀಪ ಎರಡು ಬೈಕ್ ಗಳಲ್ಲಿ ಬಂದ ಮೂವರು ಕಾರನ್ನು ತಡೆದು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ ಕಾರಿನ ಕೀಯನ್ನು ಕಸಿದು ಕೊಂಡಿದ್ದಾರೆ. ಅಲ್ಲದೆ ಕಾರಿನ ಇನ್ನೊಂದು ಬದಿಯ ಡೋರ್ ಅನ್ನು ಬಲವಂತವಾಗಿ ತೆರೆದ ಆರೋಪಿಗಳು ಮಹಿಳೆಯರ ಮೇಲೆ ಹಲ್ಲೆ ಮಾಡಿ, ಕಾರಿನಲ್ಲಿದ್ದವರ ಕೈಯಲ್ಲಿದ್ದ ಮೊಬೈಲ್ ಅನ್ನು ಕಸಿದುಕೊಂಡು ಎಸೆದು ಹಾನಿಗೊಳಿಸಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಕಾರಿನಲ್ಲಿದ್ದವರು ಬೊಬ್ಬೆ ಹಾಕಿದ್ದು ದಾರಿಯಲ್ಲಿ ಬಂದ ಪರಿಚಯದವರು ವಾಹನ ನಿಲ್ಲಿಸಿ ಜಗಳ ಬಿಡಿಸಿದ್ದಾರೆ. ಈ ವೇಳೆ ಆರೋಪಿಗಳು ಮೂವರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿ ಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.