ಮಂಗಳೂರು: ಕಳೆದ ಎರಡು ವರ್ಷಗಳಿಂದ ತಾನು ಮದುವೆಯಾದ ಗಂಡನಿಗಾಗಿ ಹೋರಾಡುತ್ತಿದ್ದ ಸುಳ್ಯದ ಪ್ರತಿಷ್ಠಿತ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬಾತನ ಪತ್ನಿ ಆಸಿಯಾ ಇಬ್ರಾಹೀಂ ಖಲೀಲ್ ಕಟ್ಟೆಮಾರ್ ತನ್ನ ಹೋರಾಟವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ನನ್ನು ಪತಿ ಸ್ವೀಕರಿಸಿ, ಅವರ ಮನೆಗೆ ಸೇರಿಸಿಕೊಳ್ಳಬೇಕೆಂದು ಎರಡು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ‘ಹೋರಾಟದಲ್ಲಿ ಜಾತಿ, ಮತದ ಭೇದವಿಲ್ಲದೆ ಎಲ್ಲರೂ ಸಹಕರಿಸಿದ್ದಾರೆ. ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಸುಖವಾದ ಜೀವನ ಸಾಗಿಸಲು ನಿರ್ಧರಿಸಿದ್ದೇನೆ’ ಎಂದರು.
ಹಲವು ಹೋರಾಟಗಳ ನಡುವೆಯೂ ಇಬ್ರಾಹಿಂ ಖಲೀಲ್ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೇ ಇರುವುದರಿಂದ ಮುಂದಕ್ಕೆ ಹೋರಾಟವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಇಬ್ರಾಹಿಂ ಖಲೀಲ್ನಿಂದ ದೂರ ಉಳಿದು ಬದುಕುವ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಆಸಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಮ್ಮ ನಡುವೆ ಈ ಮೊದಲು ಪೊಲೀಸ್ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಸ್ವ ಇಚ್ಛೆಯಿಂದ ಹಿಂಪಡೆಯುವೆ’ ಎಂದು ತಿಳಿಸಿದರು. ತನ್ನ ತವರು ಮನೆಯವರ ಅಪೇಕ್ಷೆಯಂತೆ ಘರ್ ವಾಪಸಿ ಕೂಡ ಆಗದೇ ತಾನು ಮುಸ್ಲಿಂ ಧರ್ಮದಲ್ಲಿಯೇ ಇದ್ದು ತನ್ನ ಜೀವನ ಸಾಗಿಸುತ್ತೇನೆ ಅಂತಾ ಹೇಳಿದ್ದಾರೆ.
‘ಷರಿಯತ್ ಕಾನೂನಿನ ಪ್ರಕಾರ ನಾನು ವಿವಾಹವಾಗಿದ್ದು, ಮುಂದೆ ನನ್ನಂತೆ ನೊಂದ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯ ಮುಂದುವರಿಸುತ್ತೇನೆ’ ಎಂದರು. ಸುಳ್ಯ ನಗರ ಪಂಚಾಯಿತಿ ಸದಸ್ಯ ಉಮ್ಮರ್, ಇಬ್ರಾಹಿಂ ಕತ್ತಾರ್, ಅಬ್ದುಲ್ ಲತೀಫ್ ಇದ್ದರು.