ಮಂಗಳೂರು: ನ. 2ರಂದು ಬೆಳಗ್ಗೆ 9ರಿಂದ ಪುತ್ತೂರಿನ ರೈ ಎಸ್ಟೇಟ್ಸ್ ಎಜುಕೇಶನ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ “ಅಶೋಕ ಜನ- ಮನ’ ಕಾರ್ಯಕ್ರಮವು ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು 12 ವರ್ಷದಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 75 ಸಾವಿರ ಮಂದಿಗೆ ವಸ್ತ್ರ ವಿತರಣೆಗೆ ತಯಾರಿಯಾಗಿದೆ. ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಮತ್ತು ಪುರುಷರಿಗೆ ಬೆಡ್ ಶೀಟ್ ವಿತರಣೆ ನಡೆಯಲಿದೆ. ಮಧ್ಯಾಹ್ನ ಸಹ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಗೂಡು ದೀಪ ಸ್ಪರ್ಧೆಯನ್ನೂ ಆಯೋಜಿಸಲಾಗಿರುತ್ತದೆ. ಈಗಾಗಲೇ ಸುಮಾರು 500 ಮಂದಿ ನೋಂದಾಯಿಸಿಕೊಂಡಿದ್ದಾರೆ. ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 7,500 ರೂ., ತೃತೀಯ 5 ಸಾವಿರ ರೂ. ಬಹುಮಾನ ದೊರೆಯಲಿದೆ ಎಂದರು.
ಇನ್ನು ಪತ್ರಕರ್ತರ ವಿಶ್ವ ಹಿಂದೂ ಪರಿಷತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಬ್ಬ ಹಿಂದೂ ಆಗಿ ವಿಶ್ವ ಹಿಂದೂ ಪರಿಷತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪರಿಷತ್ನ ಪ್ರಮುಖರು ಗೌರವದಿಂದ ಬಂದು ಕರೆದಿದ್ದಾರೆ. ನನಗೆ ನನ್ನ ಧರ್ಮವನ್ನು ಬಿಡಲು ಸಾಧ್ಯವಿಲ್ಲ. ಜತೆಗೆ ಇನ್ನೊಂದು ಧರ್ಮದ ವಿರೋಧವನ್ನು ನಾನು ಮಾಡುವುದಿಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಎಲ್ಲ ಕಡೆ ಕಾಣಿಸುತ್ತಿದ್ದು, ಪಕ್ಷ ನನಗೆ ಅವಕಾಶ ಕೊಟ್ಟಿದೆ. ಹಾಗಾಗಿ ಪಕ್ಷ ಬಿಟ್ಟು ಹೋಗುವ ವಿಚಾರವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಂಬಳದ ಕುರಿತ ತಮ್ಮ ಚಿಂತನೆಯನ್ನು ವ್ಯಕ್ತಪಡಿಸಿದ ಅವರು, ಬೆಂಗಳೂರು ಕಂಬಳವನ್ನು ಯಾವುದೆ ಕಾರಣಕ್ಕೂ ರದ್ದು ಮಾಡುವುದಿಲ್ಲ. ಕಂಬಳ ಆಯೋಜಿಸಲು ಈಗಾಗಲೇ ಮುಖ್ಯಮಂತ್ರಿಯವರು ಅನುಮತಿ ನೀಡಿದ್ದು, ಮಹಾರಾಣಿಯವರ ಅನುಮತಿ ಬೇಕಾಗಿದೆ. ಶೀಘ್ರದಲ್ಲೇ ಅದು ಕೂಡ ದೊರೆಯಲಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು.