ಚಿಕ್ಕಮಗಳೂರು; ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ, ಕಾಡಾನೆಯ ಭೀಕರ ದಾಳಿಗೆ ತುತ್ತಾಗಿ ಮೃತಪಟ್ಟಿದೆ. ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ, ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯನ್ನು ಸೆರೆಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ದಿಢೀರ್ ದಾಳಿ ಮಾಡಿದ ಒಂಟಿಸಲಗ ವಿಪರೀತ ಗಾಸಿಗೊಳಿಸಿತ್ತು.
ಕಾಡಾನೆಯು ದಾಳಿ ಮಾಡುತ್ತಿದ್ದಂತೆ ಉಳಿದ ಸಾಕಾನೆಗಳು ಸ್ಥಳದಿಂದ ಓಡಿದ್ದು, ಈ ವೇಳೆ ಅರ್ಜುನನೊಬ್ಬನೇ ಒಂಟಿ ಸಲಗದ ಜೊತೆ ಕಾಳಗಕ್ಕೆ ಇಳಿದಿದ್ದರೂ ಕೂಡ ಪುಂಡಾನೆ ಅರ್ಜುನನ ಹೊಟ್ಟೆಗೆ ತಿವಿದಿದೆ. ಇನ್ನು ಈ ವೇಳೆ ಗಂಭೀರ ಗಾಯಗೊಂಡ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿಹೋಗಿದ್ದಾನೆ ಎನ್ನಲಾಗಿದೆ.
ಅರ್ಜುನ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸೌಮ್ಯ ಸ್ವಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ಇಡೀ ನಾಡಿಗೆ ದುಃಖ ತರಿಸಿದೆ. 2012 ರಿಂದ 2019 ರವರೆಗಿನ ಮೈಸೂರು ದಸರಾದಲ್ಲಿ ಒಟ್ಟು 8 ಬಾರಿ ಅರ್ಜುನ ಆನೆಯು ಅಂಬಾರಿ ಹೊತ್ತಿತ್ತು.