ಬೆಳ್ತಂಗಡಿ: ಅಂದು ಆ ಪರಶುರಾಮ ದೇವರು ಕೊಡಲಿ ಎಸೆದು ಸೃಷ್ಟಿಸಿದ ಸುಂದರ ನಾಡು ನಮ್ಮ ತುಳುನಾಡು. ಸಂಸ್ಕೃತಿಯ ತವರೂರು. ದೈವ ಶಕ್ತಿಯನ್ನು ಬಲವಾಗಿ ನಂಬುವ ನಾವು ದೈವಸ್ಥಾನಗಳನ್ನು ಕಟ್ಟಿ ಕೋಲ ತಂಬಿಲಗಳನ್ನು ಕೊಡುತ್ತಾ ಕಾಲಕಾಲಕ್ಕೆ ಅದರ ಮಹಿಮೆಯ ಪ್ರಸಾದವನ್ನು ತಿನ್ನುತ್ತಾ ಬದುಕುವವರು. ಈವಾಗ ನಾವಿಲ್ಲಿ ಪರಿಚಯ ಮಾಡುತ್ತಿರುವ ಸ್ಥಳ ತುಳುನಾಡಿನಲ್ಲಿ ಮಾತ್ರವಲ್ಲದೇ ಕನ್ನಡ ನಾಡಿನ ಭಕ್ತರನ್ನೂ ತನ್ನ ಆಲಯಕ್ಕೆ ಕರೆದುಕೊಂಡು ಅವರೆಲ್ಲರಿಗೆ ನೆಮ್ಮದಿಯ ವರದಾನವನ್ನು ದಯಪಾಲಿಸಿ ಭಕ್ತರನ್ನು ಬಂಧುಗಳಂತೆ ಪೊರೆಯುತ್ತಿರುವ ಆರಿಕೋಡಿಯ ತಾಯಿ ಚಾಮುಂಡೇಶ್ವರಿಯ ಬಗ್ಗೆ.
![](https://mahaxpress.com/wp-content/uploads/2021/08/Arikodi-temple-1-641x1024.jpeg)
ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೇನುಗಲ್ಲು ಎಂಬಲ್ಲಿ ಮಲ್ಲಪ್ಪ ಮತ್ತು ಎಲ್ಲಪ್ಪ ಎಂಬುವವರು ತಾಯಿ ಚಾಮುಂಡೇಶ್ವರಿಯ ಆರಾಧಕರಾಗಿದ್ದರು. ಮಲೆನಾಡಿನಲ್ಲಿದ್ದ ತಾಯಿಯು ಪರಶುರಾಮ ಸೃಷ್ಟಿಯ ತುಳುನಾಡಿನ ಕಡೆ ಕಣ್ಣಾಯಿಸಿ ಅನ್ಯಾಯಗಳನ್ನು ತಡೆಹಿಡಿದು ದುಷ್ಟ ಸಂಹಾರ ಶಿಷ್ಟ ರಕ್ಷಣೆಗೆಂದು ಅಲ್ಲಿಂದ ಸಸಿಹಿತ್ಲು ಎಂಬ ಸ್ಥಳದಲ್ಲಿ ಭಗವತೀ ಎಂಬ ನಾಮದಿಂದ ಭಕ್ತರಿಂದ ಪೂಜಿಸಲ್ಪಡುತಿದ್ದಳು. ಅಲ್ಲಿಂದ ತನ್ನ ಬಂಟನಾದ ಗುಳಿಗನನ್ನು ಕರೆದುಕೊಂಡು ಬೆಳಾಲು ಗ್ರಾಮದ ಆರಿಕೋಡಿ ಎಂಬಲ್ಲಿ ಒಂದು ದೊಡ್ಡ ಆಲದ ಮರದ ಕೆಳಗೆ ಬಿಸಿಲ ಬೇಗೆ ತಡೆಯಲು ನೆರಳಿನ ಆಶ್ರಯವನ್ನು ಬಯಸಿ ತಾಯಿ ಶ್ರೀಚಾಮುಂಡೇಶ್ವರಿ ಮತ್ತು ಗುಳಿಗ ಕುಳಿತರು. ಹಾಗೇ ಕುಳಿತ ದೇವಿಯು ಭೂರಕ್ಷಕ ನಾಗದೇವರೂ ಅದೇ ಭೂಮಿಯಲ್ಲಿ ಇದ್ದುದರಿಂದ ತಾನೂ ಇಲ್ಲೇ ನೆಲೆಸಬೇಕೆಂಬ ನಿರ್ಧಾರ ಮಾಡಿ ಅಲ್ಲೇ ನೆಲೆಸಿದರು.
![](https://mahaxpress.com/wp-content/uploads/2021/08/Arikodi-temple-2-1024x682.jpeg)
ಶ್ರೀ ಕ್ಷೆತ್ರ ಆರಿಕೋಡಿಯಲ್ಲಿ ಚಾಮುಂಡೇಶ್ವರಿಗೆ ಎರಡು ಧೂತರು ಮುಂದೆ ಗುಳಿಗ ಹಿಂದೆ ಆಲದ ಮರದ ಬುಡದಿ ನಾಗದೇವರು. ಅಂದು ದುಷ್ಟರ ಸಂಹಾರಕ್ಕಾಗಿ ದೇವಿಯು ಒಂಭತ್ತು ಅವತಾರಗಳನ್ನು ತಾಳಿ ಒಬ್ಬೊಬ್ಬರನ್ನು ಒಂದೊಂದು ಅವತಾರಗಳ ಮೂಲಕ ಸಂಹಾರ ಮಾಡಿದ್ದಳು. ಅದರಂತೆ ಶ್ರೀ ಕ್ಷೇತ್ರದಲ್ಲಿ ಒಂದೇ ಆಲದ ಮರದ ಬುಡದಲ್ಲಿ ಮಲ್ಲಿಗೆ, ಸರಳೀ, ಕೆಂಡೊಳಿಗೆ, ಕಿನ್ನಿಗೋಳಿ, ಬಚ್ಚಿರೆ, ಕಯೇರ್, ರಾವುಬೀಜ, ಮಾದೇರ್ ಅಂದರೆ ಒಂಭತ್ತು ಪವಿತ್ರ ಮರಗಳಿವೆ. ಈ ಒಂಭತ್ತು ಮರಗಳು ತಾಯಿಯ ಒಂಭತ್ತು ಅವತಾರಗಳನ್ನು ಪ್ರತಿನಿಧಿಸುತ್ತಿವೆ ಅನ್ನುವುದು ಭಕ್ತರ ನಂಬಿಕೆ. ಇದು ವಿಚಿತ್ರ ಅನ್ನಿಸಿದರೂ ಕೂಡಾ ನಿಜವಾದ ಅಧ್ಭುತವೇ ಸರಿ.
![](https://mahaxpress.com/wp-content/uploads/2021/08/Arikodi-temple-3-1024x682.jpeg)
ಸರಿಸುಮಾರು ನಲವತ್ತು ವರ್ಷಗಳಿಂದ ನಂಬಿಕೊಂಡು ಬಂದಿರುವ ಈ ದೇವಿಯ ಆರಾಧಕರು ಮೊದಲಿಗೆ ತುಂಬಾ ಬಡತನದ ಬೇಗೆಯಲ್ಲಿದ್ದುದರಿಂದ ವರ್ಷಕ್ಕೆ ಒಂದೇ ಬಾರಿಯಂತೆ ವಾರ್ಷಿಕ ಪೂಜೆ ನಡೆಸಿಕೊಂಡು ಬರುತಿದ್ದರು. ತಾಯಿಗೆ ಪರ್ವಸೇವೆಯ ಬಳಿಕ ಗುಳಿಗನಿಗೆ ಬಿಂದು ಕೊಟ್ಟು ಅಗೆಲು ನೀಡುತಿದ್ದರು. ಕೆಲವು ವರ್ಷಗಳ ಬಳಿಕ ತಾಯಿಗೆ ಮತ್ತು ಗುಳಿಗನಿಗೆ ಕೋಲಸೇವೆ ನಡೆದಾಗ ಅಲ್ಲಿ ತಾಯಿಯು ತಾನು ಮಳೆಗಾಲದಲ್ಲಿ ನೆಯುತ್ತಿರುವ ಹಾಗೂ ಬೇಸಿಗೆಯಲ್ಲಿ ಬೇಗೆಗೆ ಉರಿಯುತ್ತಿರುವ ವಿಷಯ ತಿಳಿಸಿ ತನಗೆ ನೆಲೆಸಲು ಗುಡಿ ಬೇಕೆಂದು ಕೇಳಿದಳು. ಅದರಂತೆ ಗುಡಿಕಟ್ಟಲು ಆರಂಭಿಸಿದ ನಲವತ್ತೆಂಟು ದಿನಗಳಲ್ಲಿ ಬ್ರಹ್ಮಕಳಸವೂ ನೇರವೇರಿತ್ತು. ತಾಯಿಯ ಅಭಯಕ್ಕೆ ಭಕ್ತಾಬಿಮಾನಿಗಳು ಬರಲಾರಂಭಿಸಿದರು.ಅಂದಿನಿಂದ ಕ್ಷೇತ್ರದಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ವಾರದ ಭಾನುವಾರ, ಮಂಗಳವಾರ ಎರಡು ದಿನ ತಾಯಿಯ ಅಭಯದ ನುಡಿ ನಡೆಯುತ್ತದೆ.ಈ ಅಭಯ ನುಡಿಗೆ ರಾಜ್ಯದ ಮೂಲೆ ಮೂಲೆಯಿಂದ ಅಂದರೆ ಮೈಸೂರು, ಬೆಂಗಳೂರು, ಮುಂಬಯಿ, ಹಾಸನ, ಬಾದಾಮಿ, ಮೂಡಿಗೆರೆ, ಚಿಕ್ಕಮಗಳೂರು, ಬಳ್ಳಾರಿ,ಮಂಗಳೂರು, ಉಡುಪಿ, ಉತ್ತರಕನ್ನಡ ಮುಂತಾದ ಕಡೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ತಮ್ಮ ಕಷ್ಟ ಗಳಿಗೆ ತಾಯಿಯು ಅಭಯ ನುಡಿಯ ಮೂಲಕ ಪರಿಹಾರವನ್ನು ನೀಡುತ್ತಾರೆ.
ಅಲ್ಲಿಂದಾಚೆಗೆ ಪ್ರತೀವರ್ಷ ಫೇಬ್ರವರಿ ತಿಂಗಳ ಸಂಕ್ರಾಂತಿಯಂದು ಕ್ಷೇತ್ರದಲ್ಲಿ ಭಕ್ತಾಭಿಮಾನಿಗಳ ಕೂಡುವಿಕೆಯಲ್ಲಿ ವಾರ್ಷಿಕ ಜಾತ್ರೆ ಮತ್ತು ನವರಾತ್ರಿಯ ಒಂಭತ್ತು ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಅದಲ್ಲದೆ ನವರಾತ್ರಿ ವೇಳೆ ಕ್ಷೇತ್ರದಿಂದ ಶಾಲಾ ಮಕ್ಕಳಿಗೆ ಪೆನ್ನು ,ಪುಸ್ತಕ ಹಾಗೂ ಮಹಿಳೆಯರಿಗೆ ರವಾಕೆ, ಸೀರೆಯನ್ನು ನೀಡಲಾಗುತ್ತದೆ.
![](https://mahaxpress.com/wp-content/uploads/2021/08/Arikodi-temple-5-1024x1024.jpeg)
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯಲ್ಲಿ ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಹಾಗೂ ಮನೆಯಲ್ಲಿ ನೆಮ್ಮದಿ ಇರದಿದ್ದರೆ ನೆಮ್ಮದಿಗಾಗಿ ಜಾಗದಲ್ಲಿ ತೊಂದರೆ ಇದ್ದರೆ ಇಲ್ಲಿ ಬಂದು ಶ್ರೀ ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಂಡರೆ ಪರಿಹಾರ ಆಗುತ್ತದೆ. ಈ ವರ್ಷದಲ್ಲಿ ಅನೇಕ ಮಂದಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ತಾಯಿ ಒದಗಿಸಿ ಕೊಟ್ಟಿರುತ್ತಾರೆ, ಹಾಗೆಯೇ ಜಲಕ್ಕೆ ಜಲ ಕೊಡುವ ತಾಯಿ ಶ್ರೀ ಚಾಮುಂಡೇಶ್ವರಿ ಅನೇಕ ಬೋರ್ ಗಳಲ್ಲಿ ನೀರನ್ನು ನೀಡಿರುತ್ತಾರೆ.
2021 ರಲ್ಲಿ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಸಿಕ್ಕಿ ಫಲದ ವಿವರಗಳು : 109 ಮಂದಿಗೆ ಬೋರ್ ವೆಲ್ ಭಾಗ್ಯ , 37 ಮನೆ ನಿರ್ಮಾಣ ಭಾಗ್ಯ , 19 ಮಂದಿಗೆ ಸಂತಾನ ಭಾಗ್ಯ , 49 ಮದುವೆ ಭಾಗ್ಯ , 9 ಮಂದಿಗೆ ಸರಕಾರಿ ಉದ್ಯೋಗ ಅವಕಾಶ , ಇಬ್ಬರಿಗೆ ಕಿವಿ,ಬಾಯಿ ಬರುವತ್ತೆ ಮಾಡಿದ್ದಾರೆ ಆ ತಾಯಿ ಚಾಮುಂಡೇಶ್ವರಿ.
![](https://mahaxpress.com/wp-content/uploads/2021/08/Arikodi-temple-9.jpeg)
ಕ್ಷೇತ್ರದಲ್ಲಿ ಭಕ್ತಾಭಿಮಾನಿಗಳಿಗೆ ವಾರದಲ್ಲಿ ಮೂರು ದಿನ (ಭಾನುವಾರ, ಮಂಗಳವಾರ, ಶುಕ್ರವಾರ) ಅಭಯದ ನುಡಿ ಮತ್ತು ವಿಶೇಷ ಪೂಜೆ ನಡೆಯುತ್ತದೆ ಆ ದಿನ ನಡೆಯುವ ಸೇವೆಗಳು ಅನ್ನದಾನ ಸೇವೆ, ಸರ್ವಸೇವೆ, ಅಲಂಕಾರ ಪೂಜೆ, ಪರ್ವ ಸೇವೆ, ಅಕ್ಷರಭ್ಯಾಸ, ಲಘು ವಾಹನ ಪೂಜೆ, ದ್ವಿಚಕ್ರ ವಾಹನ ಪೂಜೆ, ಹೂವಿನ ಪೂಜೆ, ಪಂಚಕಜ್ಜಾಯ, ದೇಹರಕ್ಷೆ, ಶ್ರೀರಕ್ಷೆ, ಕುಂಕುಮಾರ್ಚನೆ ಇತ್ಯಾದಿ ಸೇವೆಗಳಿವೆ. ಭಕ್ತಾಭಿಮಾನಿಗಳು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ತಾಯಿ ಚಾಮುಂಡೇಶ್ವರಿಯ ಅಭಯದ ನುಡಿಯಂತೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಅಭಯ ನುಡಿ ಕೇಳಲು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಬೆಳಗ್ಗೆ ಟೋಕನ್ ವ್ಯವಸ್ಥೆ ಇದ್ದು ಯಾವುದೇ ಹಣ ಇರುವುದಿಲ್ಲ ಕ್ರಮ ಪ್ರಕಾರ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ ಭಕ್ತರಿಂದ ಅಭಯ ನುಡಿಗೆ ಯಾವುದೇ ರೀತಿಯ ಹಣ ಪಡೆಯುವುದಿಲ್ಲ .
ವಿಶೇಷ ಪೂಜೆಗೆ ಮಾಡಿಸಲು ಇದ್ದಾರೆ ಮಾತ್ರ ಹಣ ನೀಡಲು ಇರುವುದು. ಕ್ಷೇತ್ರಕ್ಕೆ ಬಂದ ಎಲ್ಲಾ ಭಕ್ತರಿಗೂ ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಇದೆ.
![](https://mahaxpress.com/wp-content/uploads/2021/08/Arikodi-temple-7-691x1024.jpeg)
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಅಭಯ ನುಡಿಯನ್ನು ಮನೆಯ ಯಜಮಾನ ಡೊಂಬಯ್ಯ ಗೌಡರು ಮಾಡುತ್ತಿದ್ದರು ಇದೀಗ ಅವರ ಎರಡನೇ ಮಗ ಹರೀಶ್ ಗೌಡರು ಅಭಯ ನುಡಿ ಹೇಳುತ್ತಿದ್ದಾರೆ ಇದಕ್ಕೆ ಡೊಂಬಯ್ಯ ಗೌಡರ ಮೊದಲ ಮಗ ವಸಂತ ಗೌಡರು ಸಹಕಾರಿಸುತ್ತಾರೆ ಅದಲ್ಲದೆ ಕ್ಷೇತ್ರದಲ್ಲಿ ಅನೇಕ ಮಂದಿ ಚಾಮುಂಡೇಶ್ವರಿಯ ಚಕರಿ ಮಾಡಲು ಪ್ರತಿನಿತ್ಯ ಬರುತ್ತಾರೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಬಹುದಾಗಿದೆ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ ಬೆಳಾಲು ಗ್ರಾಮ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಮೊಬೈಲ್ ಸಂಖ್ಯೆ : 9591171730