ಉಪ್ಪಿನಂಗಡಿ: ಅನಾಮಿಕನ ಮಾತಿನ ಮೋಡಿಗೆ ಮರುಳಾಗಿ ಅಡಿಕೆ ವ್ಯಾಪಾರಿ 50 ಸಾವಿರ ಕಳೆದುಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಡಿಕೆ ವ್ಯಾಪಾರಿಯೊಬ್ಬರ ಬಳಿ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವರು 500 ರೂ. ಚಿಲ್ಲರೆ ಪಡೆಯಲು ಬಂದು 50 ಸಾವಿರ ರೂ.ಗಳನ್ನು ಸುಲಭವಾಗಿ ಪಡೆದು ಹೋದ ವಂಚಿಸಿದ್ದಾರೆ.
ಅಡಿಕೆ ಅಂಗಡಿಗೆ ಬೈಕ್ನಲ್ಲಿ ಇಬ್ಬರು ಬಂದಿದ್ದು ಓರ್ವ ಬೈಕ್ನಿಂದ ಇಳಿದು ಬಂದು 500 ರೂ. ನೀಡಿ ಚಿಲ್ಲರೆ ಕೇಳಿದ್ದಾನೆ. ಅಂಗಡಿ ಮಾಲೀಕ ಚಿಲ್ಲರೆ ಕೊಟ್ಟಿದ್ದಾರೆ. ವ್ಯಕ್ತಿ ತನ್ನ ಬಳಿ ಇದ್ದ 500 ರೂ.ಗಳ ಇನ್ನೊಂದು ನೋಟು ತೋರಿಸಿ, ಇದರ ಮಧ್ಯದಲ್ಲಿ ಹಳದಿ ಬಣ್ಣ ಇದೆ ನೋಡಿ, ಇಂತಹ ನೋಟಿಗೆ ಭಾರೀ ಬೇಡಿಕೆ ಇದೆ, ನಿಮ್ಮಲ್ಲಿ ಎಷ್ಟು ಇದ್ದರೂ ನನಗೆ ಬೇಕು, ಇದೆಯಾ ಎಂದು ಪ್ರಶ್ನಿಸಿದ್ದಾನೆ.
ಆಗ ಮಾಲೀಕ ತನ್ನ ಡ್ರಾಯರಿನಲ್ಲಿ ಇದ್ದ 50 ಸಾವಿರ ಮೊತ್ತದ 500 ರೂ.ಗಳ ಒಂದು ಕಟ್ಟು ತೆಗೆದು ಈತನ ಕೈಗೆ ಕೊಟ್ಟು ಇದರಲ್ಲಿ ನಿಮಗೆ ಬೇಕಾದ ನೋಟು ಎಷ್ಟು ಇದೆ ಎಂದು ನೋಡಿ ತೆಗೆದುಕೊಳ್ಳಿ ಎಂದಿದ್ದಾರೆ. ಈ ವ್ಯಕ್ತಿ ಎಣಿಸುತ್ತಿದ್ದಂತೆ ಬೈಕ್ನ ಹತ್ತಿರ ಇದ್ದ ಇನ್ನೊರ್ವ ವ್ಯಕ್ತಿ ಬಂದು ಅಡಿಕೆಯ ದರ ಕೇಳಿದ್ದಾನೆ. ಆಗ ಮಾಲೀಕ ಆ ವ್ಯಕ್ತಿಯೊಂದಿಗೆ ಮಾತು ಆರಂಭಿಸುತ್ತಿದ್ದಂತೆ ನೋಟು ಎಣಿಸುತ್ತಿದ್ದ ವ್ಯಕ್ತಿ 50 ಸಾವಿರವಿದ್ದ 500 ರೂ.ಗಳ ಕಟ್ಟಿನ ಜತೆ ಪರಾರಿಯಾಗಿದ್ದಾನೆ.
ನಗದು ಕಳೆದುಕೊಂಡ ಅಡಿಕೆ ಅಂಗಡಿ ಮಾಲೀಕ ಪೊಲೀಸ್ ಠಾಣೆಯಲ್ಲಿ ಮೌಖಿಕವಾಗಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ