ಶಿವಮೊಗ್ಗ : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ.ಅವರನ್ನು ಗೃಹಸಚಿವ ಆರಗ ಜ್ಞಾನೇಂದ್ರ ಅಭಿನಂದಿಸಿದ್ದಾರೆ,
ಈ ಬಂಧನದಿಂದ, ಕರಾವಳಿ ಭಾಗದಲ್ಲಿ, ಮತಾಂಧ ಶಕ್ತಿಗಳ ಕುಮ್ಮಕ್ಕಿನಿಂದ ಪ್ರೇರಿತರಾಗಿ ಕೊಲೆಗೈಯುತ್ತಿದ್ದ ದುಷ್ಕರ್ಮಿಗಳಿಗೆ, ಯಾವುದೇ ಕಾರಣಕ್ಕೂ ಕಾನೂನಿನ ಬಾಹುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ. ಕೊಲೆಗಡುಕರಿಗೆ ಪ್ರೇರಣೆ ನೀಡಿದ ದುಷ್ಟರ ಹಾಗೂ ಸಮಾಜ ವಿರೋಧಿ ಶಕ್ತಿಗಳನ್ನು, ಗುರುತಿಸಿ, ಮಟ್ಟ ಹಾಕಬೇಕಾಗಿದೆ, ಹಾಗೂ ಈ ಬಗ್ಗೆ ತನಿಖೆ ನಡೆಸುತ್ತಿರುವ ಎನ್ ಐ ಏ ಸಂಸ್ಥೆಯ ಜತೆ ರಾಜ್ಯ ಪೊಲೀಸರು, ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ಪ್ರವೀಣ್ ಹತ್ಯೆ ನಂತರ ನಾನೂ ಹಾಗೂ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ಪ್ರವೀಣ್ ಕುಟುಂಬದವರನ್ನು, ಭೇಟಿಯಾದ ಸಂದರ್ಬದಲ್ಲಿ, ಪ್ರವೀಣ್ ಪೋಷಕರು, ಹಂತಕರನ್ನು ಹಿಡಿದು ತಕ್ಕ ಶಾಸ್ತಿ ನೀಡಬೇಕೆಂದು, ಪ್ರಾರ್ಥಿಸಿದ್ದರು.ಇದೀಗ ಪ್ರವೀಣ್ ಹತ್ಯೆ ಆರೋಪಿಗಳ ಬಂಧನವಾಗಿದೆ, ಹಾಗೂ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಎಲ್ಲಾ ಕಾನೂನು ಕ್ರಮ ಜರುಗಿಸಲಾಗುವುದು.ಪ್ರವೀಣ್ ನೆಟ್ಟಾರು ನನ್ನು ಅಮಾನುಷವಾಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸುವ ಮೂಲಕ, ಕರ್ನಾಟಕ ಪೊಲೀಸರ ಕಾರ್ಯಕ್ಷಮತೆ ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಇತ್ತೀಚೆಗೆ ರಾಜ್ಯದ ಹುಬ್ಬಳ್ಳಿ ಗಲಭೆ ಯಾಗಿರಬಹುದು, ಅಥವಾ ಶಿವಮೊಗ್ಗದ ಹರ್ಷ ಕೊಲೆ ಮತ್ತು ಬೆಂಗಳೂರಿನ ಚಂದ್ರು ಕೊಲೆ ಪ್ರಕರಣ ವಾಗಿರಬಹುದು, ಹಾಗೂ ಆಸಿಡ್ ಎರಚಿದ ಘಟನೆ ಯಾಗಿರಬಹುದು, ರಾಜ್ಯ ಪೊಲೀಸರು, ಅತ್ಯಂತ ದಕ್ಷತೆಯಿಂದ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ರಾಜ್ಯ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.