ಮಂಗಳೂರು: ನಗರದ ರಾಮಕೃಷ್ಣ ಮಠವು ಸ್ಥಾಪನೆಗೊಂಡು ಈ ವರ್ಷಕ್ಕೆ 75 ವರ್ಷ ಪೂರ್ತಿಯಾಗಿದ್ದು, ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಿಶೇಷ ಲೋಗೊ ಬಿಡುಗಡೆ ಮಾಡಿದರು.
ಜೂನ್ 3 ಹಾಗೂ 4 ರಂದು ರಾಮಕೃಷ್ಣ ಮಠದ ಸಭಾಂಗಣದಲ್ಲಿ ಅಮೃತಮಹೋತ್ಸವ ಸಂಭ್ರಮ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ವಿಶೇಷವಾಗಿ ಅಮೃತ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಇಡೀ ಭಾರತದಾದ್ಯಂತ ನೂರಾರು ಮಂದಿ ಸಾಧು ಸಂತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಮಾಜಕ್ಕೆ ದೊಡ್ಡಮಟ್ಟದ ಕೊಡುಗೆಗಳನ್ನು ನೀಡುತ್ತಿರುವ ಮಂಗಳೂರಿನ ರಾಮಕೃಷ್ಣ ಮಠವು 75ನೇ ವರ್ಷದ ಸಂಭ್ರಮದಲ್ಲಿದೆ. ರಾಮಕೃಷ್ಣ ಮಠವು ಧಾರ್ಮಿಕವಾದ ಚಿಂತನೆಯಿರಿಸಿ ಮಾತ್ರ ಕೆಲಸ ಕಾರ್ಯಗಳನ್ನು ಮಾಡದೆ ಪರಿಸರದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಸಂಸ್ಕೃತಿಯನ್ನು ತುಂಬುವ, ಸಂಸ್ಕಾರವನ್ನು ನೀಡುವ ಕಾರ್ಯದಲ್ಲಿ ರಾಮಕೃಷ್ಣ ಮಠ ಪೂರ್ಣಪ್ರಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.