ಬೆಂಗಳೂರು: ‘ಭಾರತ್ ಅಕ್ಕಿ’ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದೀಗ ಈ ಯೋಜನೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಈ ಯೋಜನೆಯಡಿ 29 ರೂ.ಗೆ ಅಕ್ಕಿ, 27.50 ರೂ.ಗೆ ಗೋದಿಹಿಟ್ಟು ಹಾಗೂ 60 ರೂ.ಗೆ ಕಡ್ಲೆಬೇಳೆ ವಿತರಣೆ ಮಾಡಲಾಗುತ್ತಿತ್ತು. ಗುಣಮಟ್ಟದ ದಿನಸಿ ವಿತರಿಸುವುದು ‘ಭಾರತ್ ಅಕ್ಕಿ’ ಯೋಜನೆಯ ಉದ್ದೇಶವಾಗಿದ್ದು, ಗ್ರಾಹಕರಿಂದ ‘ಭಾರತ್ ಅಕ್ಕಿ’ಗೆ ಹೆಚ್ಚಿನ ಬೇಡಿಕೆಯಿತ್ತು.
ಜೂ.10 ರವರೆಗೆ ಕೇಂದ್ರದ ಆದೇಶದಂತೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿದ್ದು, ಆನಂತರ ಪೂರೈಕೆಯಾಗಿಲ್ಲ. ಆದುದರಿಂದ ಸದ್ಯಕ್ಕೆ ವಿತರಣೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಈಗಾಗಲೇ ಈ ವಿಚಾರದ ಕುರಿತು ಹಲವು ಉಹಾಪೋಹಗಳು ಕೇಳಿಬರುತ್ತಿದ್ದು, “ಕೇಂದ್ರ ಸರಕಾರ 2024ರ ಫೆಬ್ರವರಿ 2ರಂದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಈ ಯೋಜನೆಯನ್ನು ಆರಂಭಿಸಿತು” ಎನ್ನುತ್ತಾರೆ ಹಲವರು.
ಇನ್ನು ‘ಭಾರತ್ ಅಕ್ಕಿ’ ಮಾರಾಟದ ಜವಾಬ್ದಾರಿಯನ್ನು, ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಹೊತ್ತಿತ್ತು. ಆರಂಭದಲ್ಲಿ ರಾಜ್ಯದ ಕೆಲವೆಡೆ ಟೆಂಪೋಗಳಲ್ಲಿ ತಂದು ನಿಲ್ಲಿಸಿಕೊಂಡು ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿಕೊಂಡು ಹತ್ತು ಕೆ.ಜಿ. ಅಕ್ಕಿ ಮತ್ತು ಕೆಲವು ಜಿಲ್ಲೆಗಳಲ್ಲಿ ಹತ್ತು ಕೆ.ಜಿ. ಗೋಧಿಹಿಟ್ಟನ್ನು ವಿತರಿಸಲಾಗುತ್ತಿತ್ತು. ಕೆಲವೆಡೆ ತೊಗರಿಬೇಳೆ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಹೆಚ್ಚು ವಿತರಣೆಯಾಗಲಿಲ್ಲ ಎಂದು ತಿಳಿದು ಬಂದಿದೆ.