ಪುತ್ತೂರು: ವಿಧಾನಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಸರಕಾರವು ಪ್ರತೀ ಬಡ ಕುಟುಂಬಕ್ಕೆ ಸರಕಾರಿ ಜಾಗದಲ್ಲಿ 2.75 ಸೆಂಟ್ಸ್ ಜಾಗವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ವಿಟ್ಲ ಪಟ್ಟಣ ಪಂಚಾಯತ್ನಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ 1.3 ಸೆಂಟ್ಸ್ ಜಾಗಕ್ಕೆ ಹಕ್ಕುಪತ್ರ ನೀಡುತ್ತಿದ್ದು ಅದನ್ನು ಬದಲಾಯಿಸಿ ಪ್ರತೀ ಕುಟುಂಬಕ್ಕೆ 2.75 ಸೆಂಟ್ಸ್ ಜಾಗವನ್ನು ಮಂಜೂರು ಮಾಡಿ ಅವರಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದರು. ಸುಮಾರು 200 ಕುಟುಂಬಗಳಿಗೆ 1.3 ಸೆಂಟ್ಸ್ ಜಾಗವನ್ನು ನಮೂದಿಸಿ ಹಕ್ಕುಪತ್ರವನ್ನು ನೀಡಲಾಗಿದ್ದು ಯಾವುದೇ ಫಲಾನುಭವಿಗಳು ಆ ಹಕ್ಕುಪತ್ರವನ್ನು ಸ್ವೀಕಾರ ಮಾಡಿಲ್ಲ. ಕರಾವಳಿ ಪ್ರದೇಶ ಎತ್ತರತಗ್ಗಿನಿಂದ ಕೂಡಿರುವ ಕಾರಣ 1.3 ಸೆಂಟ್ಸ್ ಜಾಗದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಮತ್ತು ಅದಕ್ಕೆ ಬ್ಯಾಂಕಿನವರು ಲೋನ್ ಕೂಡಾ ನೀಡುತ್ತಿಲ್ಲ. ನಗರಸಭಾ ವ್ಯಾಪ್ತಿಯಲ್ಲಿ 2.75 ನಿವೇಶನವನ್ನು 94 ಸಿಸಿ ಯಡಿ ನೀಡಲಾಗುತ್ತಿದೆ ಅದೇ ನಿಯಮವನ್ನು ಪಟ್ಟಣ ಪಂಚಾಯತಿಗೂ ಅನ್ವಯವಾಗುವಂತೆ ಮಾಡಿ ಎಂದರು.
ಇನ್ನು ಅಧಿವೇಶನದಲ್ಲಿ ಸಭಾಧ್ಯಕ್ಷರ ಜೊತೆ ತುಳುವಿನಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ, ‘ಸಭಾಧ್ಯಕ್ಷರೇ ಇರೆನ ಕೈತಲ್ಪದ ಊರು ವಿಟ್ಲ, ಈರ್ ಗೊಬ್ಬೊಂದಿತ್ತನ ಊರು.. ಪಾಪ ಅಲ್ಪ ಪಾಪದಕುಲು ಸರಕಾರಿ ಜಾಗೊಡು ಇಲ್ಫ್ ಕಸ್ಟ್ ಕುಲ್ಲುದೆರ್ ಅಲೆಗ್ ಒಂಜಿ ವ್ಯವಸ್ಥೆ ಆವೊಡತ್ತ ಇರೆನ ಸಪೋರ್ಟು ಬೋಡು ಎಂದು ಹೇಳಿದರು.
ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡರವರು, ನಗರಸಭಾ ಅಥವಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 600 ಚ. ಅಡಿ ಮತ್ತು ಗ್ರಾಮಾಂತರ ಭಾಗದಲ್ಲಿ 1200 ಚ ಅಡಿ ನಿವೇಶನಕ್ಕೆ ಹಕ್ಕುಪತ್ರವನ್ನು ನೀಡಲಾಗುತ್ತದೆ ಈ ಬಗ್ಗೆ ನಿಯಮವಲ್ಲ ಕಾನೂನು ರಚನೆ ಮಾಡಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಶಾಸಕರು ಗಮನಹರಿಸಿದ್ದಾರೆ. ದ ಕ ಜಿಲ್ಲಾಧಿಕಾರಿಯಿಂದ ವರದಿ ತರಿಸಿ ಆ ನಂತರ ಅದನ್ನು ಪರಿಶೀಲನೆ ಮಾಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಕಾರದ ಜೊತೆ ಚರ್ಚೆ ನಡೆಸಲಾಗುವುದು. ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.