ಪುತ್ತೂರು: ಮತದಾರರ ಗುರುತಿನ ಚೀಟಿಯನ್ನು ಅಕ್ರಮವಾಗಿ ವಿತರಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಕಚೇರಿಗೆ ಬೀಗ ಜಡಿದಿದೆ.
ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಿಲ್ಲೆ ಮೈದಾನ ಸಮೀಪದ ಮೇದಿನಿ ಜನಸೇವಾ ಕೇಂದ್ರದ ಕಚೇರಿ ಮೇಲೆ ದಾಳಿ ನಡೆಸಿದೆ.
ಪುತ್ತೂರಿನ ವ್ಯಕ್ತಿಯೊಬ್ಬರು ವೋಟರ್ ಐಡಿ ಕಳೆದುಕೊಂಡ ಬಗ್ಗೆ ಜನಸೇವಾ ಕೇಂದ್ರದಲ್ಲಿ ಹೇಳಿದ್ದರು.ಇದಕ್ಕೆ ಆನ್ ಲೈನ್ ಅರ್ಜಿ ಪ್ರಕ್ರಿಯೆ ನಡೆಸಿ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ ಎಂದು ಆರೋಪಿಸಲಾಗಿದೆ.ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ಅವರು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ತೋರಿಸಿದ್ದಾರೆಎನ್ನಲಾಗಿದೆ.ಈ ವೇಳೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ ಕೇಂದ್ರದಲ್ಲಿ ವೋಟರ್ ಐಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ ತನಿಖೆ ಮಾಡಿದೆ.
ದಾಳಿ ವೇಳೆ ಜನಸೇವಾ ಕೇಂದ್ರದಿಂದ ಹಲವು ವೋಟರ್ ಐಡಿ ಸೇರಿ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.