ಚೆನ್ನೈ: ತಮಿಳುನಾಡಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಸದ್ದಿಲ್ಲದೇ 2ನೇ ಮದುವೆಯಾಗಿದ್ದ ಸುಂದರ ಟ್ರಾವೆಲ್ಸ್ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಇದೀಗ ತನ್ನ ಎರಡನೇ ಗಂಡನ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಸಬ್ ಇನ್ಸ್ಪೆಕ್ಟರ್ ವಸಂತ್ರಾಜ್ (40) ಜೊತೆ ಕೆಲ ತಿಂಗಳ ಹಿಂದೆ ರಹಸ್ಯವಾಗಿ ಮದುವೆಯಾಗಿದ್ದ ನಟಿ ರಾಧಾ, ಇದೀಗ ಆತ ತನಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ನನ್ನ ನಡತೆಯ ಬಗ್ಗೆ ಅನುಮಾನ ಪಡುತ್ತಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರಿಗೂ 2ನೇ ಮದುವೆ
ನಟಿ ರಾಧಾ ಈಗಾಗಲೇ ನಿರ್ದೇಶಕರೊಬ್ಬರನ್ನು ಮದುವೆಯಾಗಿದ್ದರು. ಮತ್ತು ಇವರಿಗೆ ಒಂದು ಮಗನಿದ್ದಾನೆ. ನಿರ್ದೇಶಕರಿಗೆ ವಿಚ್ಛೇದನ ನೀಡಿರುವ ರಾಧಾ ಮಗನೊಂದಿಗೆ ತವರು ಮನೆ ಸೇರಿದ್ದರು. ಹಾಗೆಯೆ ಸಬ್ ಇನ್ಸ್ಪೆಕ್ಟರ್ ವಸಂತ್ರಾಜ್ ಕೂಡ ಮೊದಲು ಮದುವೆಯಾಗಿದ್ದು, ಆದರೆ ಮೊದಲ ಪತ್ನಿಗೆ ಯಾವುದೇ ರೀತಿಯ ವಿಚ್ಛೇದನ ನೀಡದೆ ರಾಧಾರನ್ನು ರಹಸ್ಯವಾಗಿ ಮದುವೆಯಾಗಿದ್ದರು. ಇದೀಗ ಇನ್ಸ್ಪೆಕ್ಟರ್ ಮತ್ತು ರಾಧಾಳ ಅನೈತಿಕ ಸಂಬಂಧದ ಬಗ್ಗೆ ತಿಳಿದ ಇನ್ಸ್ಪೆಕ್ಟರ್ ನ ಮೊದಲನೇ ಪತ್ನಿ ಸಹ ಇದೀಗ ತಿರುವಣಮಿಯುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಧಾಳಿಗೆ ಇನ್ಸ್ಪೆಕ್ಟರ್ ರ ಪರಿಚಯ ?
ಸಿನೆಮಾವೊಂದರ ಶೂಟಿಂಗ್ ವೇಳೆ ರಾಧಾಳಿಗೆ ಎಸ್ಐ ವಸಂತ್ರಾಜ್ ನ ಪರಿಚಯವಾಗಿತ್ತು. ಬಳಿಕ ಫೋನ್ ನಂಬರ್ ಸಹ ವಿನಿಮಯವಾಗಿತ್ತು. ಹೀಗೆ ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಇದು ಪ್ರೀತಿಗೆ ತಿರುಗಿತ್ತು. ತಿರುವಣಮಿಯುರ್ ಪೊಲೀಸ್ ಠಾಣೆಯಿಂದ ರಾಧಾಗಾಗಿ ವಡಪಳನಿ ಪೊಲೀಸ್ ಠಾಣೆಗೆ ವಸಂತ್ರಾಜ್ ವರ್ಗಾಯಿಸಿಕೊಂಡಿದ್ದ. ಕೆಲವು ಸಮಯಗಳವರೆಗೆ ರಾಧಾ ಮತ್ತು ವಸಂತ್ರಾಜ್ ಚೆನ್ನಾಗಿಯೇ ಇದ್ದರು. ಆದರೆ, ಆಕೆ ವರ್ತನೆಯಿಂದಾಗಿ ನಂತರದ ದಿನಗಳಲ್ಲಿ ವಸಂತ್ರಾಜ್ ಮತ್ತೆ ವಡಪಳನಿ ಠಾಣೆಯಿಂದ ಎಣ್ಣೂರು ಪೊಲೀಸ್ ಠಾಣೆ ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಇವರಿಬ್ಬರ ಮದ್ಯೆ ವೈಮನಸ್ಸು ಶುರುವಾಗಿದ್ದು ಹೇಗೆ ?
ಮೂಲಗಳ ಪ್ರಕಾರ ರಾಧಾ ಸಬ್ ಇನ್ಸ್ಪೆಕ್ಟರ್ ಜೊತೆ 2ನೇ ಮದುವೆಯಾಗಿರುವ ನಂತರವೂ ಕೆಲಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರು. ಮತ್ತು ಅವರೊಂದಿಗೆ ಬೇರೆ ಬೇರೆ ಕಡೆ ಸುತ್ತಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ಸಬ್ ಇನ್ಸ್ಪೆಕ್ಟರ್ ವಸಂತ್ರಾಜ್, ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎಂದು ತಿಳಿದುಬಂದಿದೆ.
ರಾಧಾರಿಗೆ ವಿವಾದ ಇದೇ ಮೊದಲಲ್ಲ!
ಕೆಲ ವರ್ಷಗಳ ಹಿಂದೆ ಉದ್ಯಮಿ ಫೈಜೂಲ್ ವಿರುದ್ಧ ರಾಧಾ ಕೇಸು ದಾಖಲಿಸಿದ್ದರು. 6 ವರ್ಷಗಳಿಂದ ಸಂಬಂಧದಲ್ಲಿದ್ದೆವು, ಇದೀಗ ಮದುವೆ ಆಗಲು ನಿರಾಕರಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಖಾಸಗಿ ವಿಡಿಯೋ ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದರು. ಇದಾದ ಕೆಲವೇ ವಾರಗಳನ್ನು ತನ್ನ ದೂರನ್ನು ರಾಧಾ ವಾಪಸ್ಸು ಪಡೆದುಕೊಂಡಿದ್ದರು.