ಬೆಂಗಳೂರು: ನಟಿ ಪ್ರೇಮಾ ಕೊರಗಜ್ಜನ ಕ್ಷೇತ್ರದಲ್ಲಿ ಕಂಕಣಭಾಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ ಎಂಬ ವಿಚಾರ ಎರಡು ಮೂರು ದಿನಗಳ ಹಿಂದೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನಟಿ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ಮದುವೆ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂದು ಪ್ರೇಮಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಪ್ರೇಮಾ, ನಾನು ಸದ್ಯಕ್ಕೆ ಎರಡನೇ ಮದ್ವೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕೂ ಹೋಗುವುದು ತಪ್ಪು ಅಂದ್ರೆ ಏನು ಮಾಡುವುದು, ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ, ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪವನ್ನು ಮಾಡಿಲ್ಲ ಎಂದು ಪ್ರೇಮಾ ತಿಳಿಸಿದ್ದಾರೆ.
ನಾನು ಇನ್ನೂ ಸಾಕಷ್ಟು ಸಾಧಿಸಬೇಕಾದದ್ದು ಇದೆ, ನಾನು ಮದ್ವೆ ಅದರೆ ನನ್ನ ಕುಟುಂಬ ಮತ್ತು ಅಭಿಮಾನಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿರುವ ನಟಿ ಪ್ರೇಮಾ, ಗಾಸಿಪ್ ಹಬ್ಬಿಸಿದವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಪ್ರೇಮಾ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.