ಬೆಂಗಳೂರು:- ಸ್ಯಾಂಡಲ್ ವುಡ್ ನಟಿ ಚಂದನಾ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ವರದಿಯಾಗಿದೆ.
ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಪ್ರಾಶನ ಮಾಡಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಚಂದನಾ ಸಾವಿಗೆ ಆಪ್ತರು, ಬಂಧುಮಿತ್ರರು ಕಂಬನಿ ಮಿಡಿದಿದ್ದಾರೆ.
ಇತ್ತೀಚೆಗೆ ಮದುವೆಯಾಗುವಂತೆ ಪ್ರಿಯಕರ ದಿನೇಶ್ಗೆ ಚಂದನಾ ಒತ್ತಾಯ ಮಾಡಿದ್ದರು. ‘ಈಗ ಲಾಕ್ಡೌನ್ ಇದೆ. ಹೀಗಾಗಿ ಲಾಕ್ಡೌನ್ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ’ ದಿನೇಶ್ ಭರವಸೆ ನೀಡಿದ್ದ. ಆದರೆ, ಮತ್ತೆ ಉಲ್ಟಾ ಹೊಡೆದಿದ್ದ ದಿನೇಶ್ ಮದುವೆಯಾಗಲು ನಿರಾಕರಿಸಿದ್ದ.
ಇನ್ನು, ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು, ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ದಿನೇಶ್ ಅವರು ಸದ್ಯ ನಾಪತ್ತೆಯಾಗಿದ್ದಾರೆ.
ಈ ಎಲ್ಲ ಘಟನೆಯಿಂದ ಮನನೊಂದ ಚಂದನಾ ಮೇ 28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಂದನ ಇಂದು ಮೃತಪಟ್ಟಿದ್ದಾರೆ.
ದಿನೇಶ್ ಮಾರತ್ತಹಳ್ಳಿಯ ಕಂಪನಿಯೊಂದಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಚಂದನಾ ಹಾಸನದ ಬೇಲೂರು ಮೂಲದವರು. ಸದ್ಯ ದಿನೇಶ್ ಹಾಗೂ ಆತನ ಕುಟುಂಬದವರ ಮೇಲೆ ದೂರು ದಾಖಲಾಗಿದೆ.