ಪುತ್ತೂರು: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ದರೋಡೆ ಮಾಡಿ ಆರೋಪಿ ಪರಾರಿಯಾದ ಘಟನೆ ಪುತ್ತೂರು ರೈಲ್ವೇ ನಿಲ್ದಾಣದ ಸಮೀಪದ 1.ಕಿಮೀ ದೂರದ ಹಾರಾಡಿ, ಸಿಟಿ ಗುಡ್ಡೆ ಮಧ್ಯೆ ನಡೆದಿದೆ. ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಇಂದು(ಆ.30) ನಸುಕಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದೆ.
ಕಾರವಾರ ಅಧ್ಯಾಪಕರಾಗಿರುವ ರಮೇಶ್ ಮತ್ತು ನಿರ್ಮಲಾ ದಂಪತಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದು ಕೊಂಡವರು. ನಿರ್ಮಲಾ ಅವರು ಮಲಗುವ ವೇಳೆ ತಲೆಯ ಅಡಿಯಲ್ಲಿ ಬ್ಯಾಗ್ ಇಟ್ಟಿದ್ರು. ಈ ವೇಳೆ ಅಪರಿಚಿತ ವ್ಯಕ್ತಿ ಬ್ಯಾಗ್ ಎಳೆಯುತ್ತಿರುವುದನ್ನು ಗಮನಿಸಿ ಗಾಬರಿಗೊಂಡು ಆ ವ್ಯಕ್ತಿಯನ್ನು ದೂಡಿದ್ದಾರೆ. ಆಗ ನಿರ್ಮಲಾ ಅವರ ಕುತ್ತಿಗೆಯಲ್ಲಿದ್ದ ವ್ಯಾನಿಟಿ ಬ್ಯಾಗ್ ಕಡಿದು ವ್ಯಾನಿಟಿ ಬ್ಯಾಗ್ನೊಂದಿಗೆ ಆತ ರೈಲು ಬೋಗಿಯಿಂದ ಹಾರಲೆತ್ನಿಸಿದ ಸಂದರ್ಭ ಮತ್ತೆ ಆತನನ್ನು ಹಿಡಿದ ಮಹಿಳೆಯು ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್ ಎಳೆದಿದ್ದಾರೆ. ರೈಲಿನ ವೇಗ ನಿಧಾನವಾಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಇದರ ಜೊತೆಗೆ ಮಹಿಳೆಯೂ ಆಯ ತಪ್ಪಿ ರೈಲಿನಿಂದ ಹಳಿಯ ಮೇಲೆ ಬಿದ್ದಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.