ಮಂಗಳೂರು: ಸ್ಕೂಟರ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿ ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿದ ಘಟನೆ ಉಳ್ಳಾಲ ಸಮೀಪದ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ.
ಕುತ್ತಾರು ಸಂತೋಷ ನಗರದ ನಿವಾಸಿ ಅನಿಲ್ ಕುಮಾರ್ (41) ಮೃತ ದುರ್ದೈವಿ. ಅನಿಲ್ ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಂಜನಾಡಿಯ ಕಲ್ಕಟ್ಟ ಮಾರ್ಗವಾಗಿ ಫುಡ್ ಡೆಲಿವರಿ ಆರ್ಡರ್ ಹಿಡಿದುಕೊಂಡು ತೆರಳುವ ಸಂದರ್ಭ ಎದುರಿನಿಂದ ಬಂದ ಕೇರಳ ನೋಂದಣಿಯ ಕಾರನ್ನ ಅಬೂಬಕರ್ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಅನಿಲ್ ಸ್ಥಳೀಯ ಮನೆಯ ಕಂಪೌಂಡಿಗೆ ಎಸೆಯಲ್ಪಟ್ಟು ಬಳಿಕ ರಸ್ತೆಗೆ ಉರುಳಿ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅಪಘಾತ ನಡೆದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ 1.45ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.