ಕಾರ್ಕಳ : ರಸ್ತೆ ಬದಿ ನಿಂತಿದ್ದ ಕಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಕಾರ್ಕಳದ ಕರಿಯ ಕಲ್ಲು ರುದ್ರಭೂಮಿಯ ಬಳಿ ನಡೆದಿದೆ.
ಮೃತರನ್ನು ಗದಗ ಮೂಲದ ಕಾರ್ಕಳ ಜೋಡುರಸ್ತೆಯ ನಿವಾಸಿ ಗಿರೀಶ್ ಛಲವಾದಿ (38) ಮೃತ ದುರ್ದೈವಿ. ಗಾಯಗೊಂಡಿರುವ ಕೃಷ್ಣ(22) ಎಂಬವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಿರೀಶ್ ಬಾವಿ ಕೆಲಸಕ್ಕಾಗಿ ಕೆಲಸದವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಜೋಡುರಸ್ತೆಯಿಂದ ಭಜಗೋಳಿಗೆ ಹೊರಟಿದ್ದರು. ದಾರಿ ಮಧ್ಯೆ ಕಾರಿನ ಸೈಲೆನ್ಸರ್ನಲ್ಲಿ ಜಾಸ್ತಿ ಹೊಗೆ ಬರುತ್ತಿದ್ದುದನ್ನು ಗಮನಿಸಿ ಕಾರು ನಿಲ್ಲಿಸಿದ್ದರು. ಗಿರೀಶ್ ಕಾರಿನ ಬಳಿ ನಿಂತುಕೊಂಡಿದ್ದರೆ, ಕೃಷ್ಣ ಕಾರಿನ ಮುಂಭಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುಲ್ಕೇರಿ ಕಡೆಯಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ.
ಇದರಿಂದ ಇವರಿಬ್ಬರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.