ಸುಳ್ಯ:ಸಿಲಿಂಡರ್ ಸಾಗಾಟದ ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರಿಗೆ ಹಾಗೂ ಲಾರಿ ಚಾಲಕನಿಗೆ ಗಾಯಗಳಾದ ಘಟನೆ ನವೆಂಬರ್ 25 ರ ರಾತ್ರಿ ಸುಳ್ಯದ ಜಾಲ್ಸೂರು ಮುಖ್ಯ ರಸ್ತೆಯ ಕಾಳಮ್ಮನೆ ಬಳಿ ನಡೆದಿದೆ.
ಮಂಗಳೂರಿನಿಂದ ಮಂಡ್ಯಕ್ಕೆ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿಗೆ ಮಡಿಕೇರಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದ ಇನ್ನೋವಾ ಕಾರು ವಿರುದ್ಧ ದಿಕ್ಕಿನಿಂದ ಬಂದ ಕಾರಣ ಲಾರಿಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿಗೆ ನಿಂತಿತೆನ್ನಲಾಗಿದೆ.
ಅಪಘಾತ ನಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೂ ಕಾಲಿಗೆ ಬಲವಾದ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ.
ಅಪಘಾತ ನಡೆದ ರಭಸಕ್ಕೆ ಲಾರಿಯ ಟೈಯರ್ ಬ್ಲಾಸ್ಟ್ ಆಗಿದ್ದು,ಡೀಸೆಲ್ ಸೋರಿಕೆ ಆಗುತ್ತಿದ್ದಲೆನ್ನಲಾಗಿದೆ. ಗ್ಯಾಸ್ ಸಾಗಾಟದ ಲಾರಿಯಾದುದರಿಂದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಸುಳ್ಯ ಠಾಣಾ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎ.ಎಸ್.ಐ ತಾರನಾಥ್, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.