ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಪಣಂಬೂರು ಬೈಕಂಪಾಡಿಯಲ್ಲಿರುವ ಕಾರ್ಮಿಕರ ಸಚಿವಾಲಯದ ಕಚೇರಿಯಲ್ಲಿ ನಡೆದಿದೆ. ವಿಷ್ಣುಮೂರ್ತಿ ಭಟ್ ಸಿಕ್ಕಿಬಿದ್ದ ಅಧಿಕಾರಿ.
ಪಣಂಬೂರು ಬೈಕಂಪಾಡಿಯಲ್ಲಿರುವ ಕಾರ್ಮಿಕರ ಸಚಿವಾಲಯದ ಕಚೇರಿಯಲ್ಲಿ ವಿಷ್ಣುಮೂರ್ತಿ ಭಟ್ ಅವರು ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಪಣಂಬೂರು ನಿವಾಸಿಯಾಗಿರುವ ಪ್ರಶಾಂತ್ ಕುಮಾರ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಪತ್ನಿ ಐಎಸ್ ಐ ಸದಸ್ಯತ್ವ ಹೊಂದಿದ್ದಾರೆ. ವೈದ್ಯರ ಸಲಹೆಯಂತೆ ಐಎಸ್ಐ ಡಿಸ್ಪೆನ್ಸರಿಯಿಂದ ಮಾತ್ರೆ ಹಾಗೂ ಇಂಜೆಕ್ಷನ್ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಇಲ್ಲದೇ ಇದ್ದಾಗ ಮೆಡಿಕಲ್ ನಿಂದ ಖರೀದಿಸಿ ಅದರ ಬಿಲ್ ನೀಡುತ್ತಿದ್ದರು. ಈ ಬಿಲ್ ಮಂಜೂರಾತಿಗೆ ವಿಷ್ಣುಮೂರ್ತಿ ಭಟ್ 2 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂಬ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಇಂದು ಅವರು ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಎಸಿಬಿ ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕರಾದ ಸಿ.ಎ.ಸೈಮನ್ ಅವರ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಠಾಣೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರಾದ ಕೆ.ಸಿ.ಪ್ರಕಾಶ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ.ಡಿ.ಎ, ರಾಧಾಕೃಷ್ಣ.ಕೆ, ಉಮೇಶ್,ವೈಶಾಲಿ,ಗಂಗಣ್ಣ. ಆದರ್ಶ, ರಾಕೇಶ್, ಭರತ್, ಮೋಹನ್ ಸಾಲಿಯಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.