ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದು ಶಿಕ್ಷಣ ತಜ್ಞರು, ಪೋಷಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ.
ಸಮಾಜದ ಎಲ್ಲಾ ವರ್ಗಗಳ ಪ್ರಬಲ ವಿರೋಧದ ನಡುವೆಯೂ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲೇಬೇಕು ಎಂಬುದನ್ನು ತನ್ನ ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡು ದುಸ್ಸಾಹಸಕ್ಕೆ ಕೈ ಹಾಕಿರುವ ರಾಜ್ಯ ಸರಕಾರದ ಕ್ರಮ ಅತ್ಯಂತ ಖಂಡನೀಯ. ಮಕ್ಕಳ ಆರೋಗ್ಯದ ಮೇಲಾಗುವ ಮುಂದಿನ ಎಲ್ಲ ಅನಾಹುತಗಳಿಗೆ ಶಿಕ್ಷಣ ಸಚಿವರೇ ನೇರ ಹೊಣೆಗಾರರು ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಎಚ್ಚರಿಕೆ ನೀಡಿದೆ.
ಅನೇಕ ಕಡೆಗಳಲ್ಲಿ ಸೀಲ್ ಡೌನ್ ಆಗಿರುವಂತಹ ಪ್ರದೇಶಗಳ ಕೆಲವೇ ಮೀಟರುಗಳ ಅಂತರದಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಉದಾಹರಣೆ ಎಂಬಂತೆ ಹೊಂಗಸಂದ್ರ ವಾರ್ಡಿನ ಸೀಲ್ ಡೌನ್ ಆಗಿರುವ ಪ್ರದೇಶದ ಕೆಲವೇ ಮೀಟರ್ ಗಳ ಅಂತರದಲ್ಲಿ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.ಇದೇ ರೀತಿಯ ಕಾಯಿಲೆಯನ್ನು ಪಸರಿಸುವ ಕಾರ್ಖಾನೆಗಳಂತ ನೂರಾರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಪರೀಕ್ಷೆಯ ನಂತರದ ದಿನಗಳಲ್ಲಿ ಮಕ್ಕಳಲ್ಲಿ ವ್ಯಾಪಿಸುವ ಪ್ರತಿಯೊಂದು ಕೋರೋನ ಸೋಂಕಿತ ಪ್ರಕರಣಗಳಿಗೂ ಶಿಕ್ಷಣ ಸಚಿವರೇ ನೇರ ಹೊಣೆಗಾರರಾಗಬೇಕಾಗುತ್ತದೆ. ಕೋವಿಡ್ 19 ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವ ಕ್ರಿಮಿನಲ್ ಪ್ರಕರಣಗಳಿಗೆ ಶಿಕ್ಷಣ ಸಚಿವರು ಗುರಿಯಾಗಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷವು ಎಚ್ಚರಿಸುತ್ತದೆ.
ಇದೇ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಕಾಲೇಜುಗಳ ಪ್ರವೇಶಾತಿ ದಂಧೆ ಅವ್ಯಾಹತವಾಗಿ ನಡೆಸಲು ಶಿಕ್ಷಣ ಸಚಿವರು ಅಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂಬ ಗುಮಾನಿ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇದುವರೆವಿಗೂ ಯಾವುದೇ ಹೇಳಿಕೆಗಳನ್ನು ನೀಡದ ಮುಖ್ಯಮಂತ್ರಿಗಳು ಈಗಲಾದರೂ ಮಧ್ಯ ಪ್ರವೇಶಿಸಿ ಕೂಡಲೇ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ಬೆಂಗಳೂರು ನಗರ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದರೆ ಶಿಕ್ಷಣ ಸಚಿವರೇ ನೇರ ಹೊಣೆ: ಎಎಪಿ
- Advertisement -
- Advertisement -
- Advertisement -