ಬೆಳಗಾವಿ: ಕೋಟ್ಯಧಿಪತಿಯಾಗಿರುವ ಸಂತೋಷ ಪದ್ಮನ್ನ ವರ ಸಹಜ ಸಾವು ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು ಇದು ಸಹಜವಾದ ಸಾವಲ್ಲ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಅಕ್ಟೋಬರ್ 9ರಂದು ಸಂತೋಷ ಪದ್ಮನ್ನವರ ಸಾವನ್ನಪ್ಪಿದ್ದು, ಸಾವಿಗೆ ಅವರ ಪತ್ನಿಯೇ ಕಾರಣ ಎಂಬುದು ಮೇಲ್ನೋಟ್ಟಕ್ಕೆ ಕಂಡುಬಂದಿದ್ದು ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಅಕ್ಟೋಬರ್ 9ರಂದು ಕೋಟ್ಯಧಿಪತಿ, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ನೀಡಿದ ಹೇಳಿಕೆ ಅನ್ವಯ ಲಿಂಗಾಯತ ಸಂಪ್ರದಾಯದಂತೆ ರುದ್ರಭೂಮಿಯಲ್ಲಿ ಕುಟುಂಬದವರ ಜೊತೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಸಂತೋಷ ಪದ್ಮನ್ನವರ ಪುತ್ರಿ ಅಂತ್ಯಕ್ರಿಯೆ ನೆರವೇರಿದ ಬಳಿಕ ಮನೆ ಮಂದಿಯ ಜೊತೆ ಮನೆಯ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಲು ತೆರಳಿದ್ದು, ಸಹೋದರನ ಬಳಿ ಚೆಕ್ ಮಾಡಲು ತಿಳಿಸಿದ್ದಾಳೆ. ಇನ್ನು ಈ ವೇಳೆ ಅಲ್ಲೇ ಇದ್ದಂತಹ ತಾಯಿ ಮಗಳಿಗೆ ಮೊದಲು ಸ್ನಾನ ಮಾಡಿ ಬಾ ಆಮೇಲೆ ಸಿಸಿ ಟಿವಿ ಪರಿಶೀಲನೆ ಮಾಡು ಎಂದು ಗದರಿಸಿದ್ದಾಳೆ. ಮಗಳು ತಾಯಿಯ ಮಾತನ್ನು ಕೇಳಿ ಸ್ನಾನಕ್ಕೆ ಹೋಗಿದ್ದು, ತಾಯಿ ತನ್ನ ಪುತ್ರರ ಬಳಿ ಸಿಸಿ ಟಿವಿ ಫೂಟೇಜ್ ಡಿಲೀಟ್ ಮಾಡುವಂತೆ ಹೇಳಿದ್ದಾಳೆ. ಮಕ್ಕಳು ಆಕೆ ಹೇಳಿದಂತೆಯೇ ಸಿಸಿಟಿವಿ ಪೂಟೇಜ್ ಅನ್ನು ಡಿಲೀಟ್ ಮಾಡಿದ್ದು, ಮಗಳು ಸ್ನಾನ ಮಾಡಿ ಬಂದು ಸಿಸಿ ಫೂಟೇಜ್ ಪರಿಶೀಲನೆ ನಡೆಸಿದ ವೇಳೆ ತಂದೆ ತೀರಿಹೋದ ದಿನದ ಫೂಟೇಜ್ ಡಿಲೀಟ್ ಆಗಿತ್ತು. ಇನ್ನು ಈ ಕುರಿತಂತೆ ಸಹೋದರರ ಬಳಿ ವಿಚಾರಿಸಿದಾಗ ಪೂಟೇಜ್ ಅನ್ನು ಅಮ್ಮ ಡಿಲೀಟ್ ಮಾಡಲು ಹೇಳಿದ್ದಾಳೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಮಗಳು ತನ್ನ ತಂದೆಯ ಸಾವಿನ ಹಿಂದೆ ಕೊಲೆ ಅನುಮಾನವಿದೆ ಎಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾಳೆ.
ಮಾಳಮಾರುತಿ ಠಾಣೆ ಪೊಲೀಸರು ದೂರು ಸ್ವೀಕರಿಸಿ, ಕೂಡಲೇ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಈ ನಿಟ್ಟಿನಲ್ಲಿ ಸಂತೋಷ್ ಅವರ ಅಕ್ಕಪಕ್ಕದ ಮನೆಯವರ ಸಿಸಿ ಟಿವಿ ದೃಶ್ಯಾವಳಿಯನ್ನು ಕೂಡ ಗಮನಿಸಿದ್ದಾರೆ. ಇದರಿಂದ ಮನೆಗೆ ಯಾರೋ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂತೋಷ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಪತಿ ತನಗೆ ನಿರಂತರವಾಗಿ ಕಿರುಕುಳ ನೀಡಿತ್ತಿದ್ದು, ಅಲ್ಲದೆ ನನ್ನ ಮೇಲೆ ಅನುಮಾನ ಪಡುತ್ತಿದ್ದ. ಹಾಗಾಗಿ ತನ್ನ ಫೇಸ್ ಬುಕ್ ಗೆಳೆಯನ ಜೊತೆ ಸೇರಿ ಕುಡಿಯುವ ನೀರಿಗೆ ನಿದ್ದೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದೆ. ಬಳಿಕ ದಿಂಬಿನ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದುರುವುದಾಗಿ ಒಪ್ಪಿಕೊಂಡಿದ್ದಾಳೆ. ಇತ್ತ ಸಂತೋಷ್ ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ತನ್ನ ಪತಿ ಹೃದಯಾಘಾತಗೊಂಡು ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಸಂತೋಷ್ ಪತ್ನಿ ನಿಜ ಹೇಳುತ್ತಿದ್ದಾಳೆ ಎಂದು ನಂಬಿ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದಾರೆ. ಇದರ ನಡುವೆ ಸಂತೋಷ್ ಅವರ ಓರ್ವ ಮಗಳು ಬೆಂಗಳೂರಿನಲ್ಲಿದ್ದು ಆಕೆಗೂ ವಿಚಾರ ತಿಳಿಸಲಾಗಿತ್ತು ಅದರಂತೆ ಆಕೆಯೂ ಮನೆಗೆ ಬಂದಿದ್ದಳು.
ಇನ್ನು ಇತ್ತ ಸಂತೋಷ ಪದ್ಮನ್ನವರ ಮಗಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗುತ್ತಿದ್ದಂತೆ ಬಿಮ್ಸ್ ವೈದ್ಯರು, ಎಫ್ಎಸ್ಎಲ್, ಫಾರೆನ್ಸಿಕ್, ಮಾಳಮಾರುತಿ ಠಾಣೆ ಪೊಲೀಸರು ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಹೂತಿದ್ದ ಸಂತೋಷ್ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ಹೂತಿದ್ದಾರೆ. ಸಂತೋಷ್ ಅವರ ಸಾವು ಸಹಜವಲ್ಲ ಎಂದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ. ಇನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕಷ್ಟೇ ಸತ್ಯಾಂಶ ಹೊರಬರಲಿದೆ.