ಮಡಿಕೇರಿ: ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ತೆರಳುತ್ತಿದ್ದ ಲಾರಿ ಆಕೆಗೆ ಢಿಕ್ಕಿ ಹೊಡೆದಿದ್ದು, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ನರ್ಸರಿ ಬಳಿ ನ.28ರ ಗುರುವಾರ ನಡೆದಿದೆ.
ಮೃತಪಟ್ಟಿರುವ ಬಾಲಕಿ ಸ್ಥಳೀಯ ನಿವಾಸಿ ರವಿ ಹಾಗೂ ಸಿಂಧು ದಂಪತಿ ಪುತ್ರಿ ಗಾನವಿ(6) ಎಂದು ತಿಳಿದು ಬಂದಿದೆ. ಈಕೆ ಮಡಿಕೇರಿಯ ಮಜ್ಜಿಗೆಹಳ್ಳ ಪರಂಬು ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಈಕೆ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಗಾನವಿಯನ್ನು ಸಾರ್ವಜನಿಕರು ಆಟೋ ರಿಕ್ಷಾದಲ್ಲಿ ತಿತಿಮತಿ ವಿವೇಕಾನಂದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಳು ಎಂದು ತಿಳಿದು ಬಂದಿದೆ. ಗಾನವಿಗೆ ಡಿಕ್ಕಿ ಹೊಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಕನಕಪುರ ಮೂಲದ ಹರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ತಿತಿಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಗೋಣಿಕೊಪ್ಪ ವೃತ್ತನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಠಾಣಾಧಿಕಾರಿ ಪ್ರದೀಪ್ ಕುಮಾರ್, ಎಎಸ್ಐ ದೇವರಾಜ್ ಸಿಬಂದಿಗಳಾದ ನೆಹರು, ಸೀರಿಲ್, ಭರತ್ ರಾಘವೇಂದ್ರ ಹಾಗೂ ಶುಭ ಮತ್ತಿತರರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.