ಬೆಳ್ತಂಗಡಿ : ಬೆಳ್ತಂಗಡಿಯ ವಾಣಿ ಪಿ.ಯು ಕಾಲೇಜಿನ ವಿದ್ಯಾರ್ಥಿಯೋರ್ವ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಿದ ಘಟನೆ ನಡೆದಿದೆ.
ಕಾಲೇಜಿನಿಂದ ಡಿಬಾರ್ ಮಾಡಲಾದ ವಿದ್ಯಾರ್ಥಿಯನ್ನು ಶಹದ್ ಮೊಹಮ್ಮದ್ ಎಂದು ಹೇಳಲಾಗಿದೆ. ಕಳೆದ 19 ದಿನಗಳಿಂದ ವಿದ್ಯಾರ್ಥಿಯು ಕಾಲೇಜಿಗೆ ಸೇರಿಸುವಂತೆ ವಿನಂತಿ ಮಾಡಿದ್ದರೂ ಇದಕ್ಕೆ ಮಣಿಯದ ಸಂಸ್ಥೆಯು ಕಾಲೇಜಿನಿಂದ ಹೊರಹಾಕಿದೆ.
ಇಂದು ನ್ಯಾಯಕ್ಕಾಗಿ ವಿದ್ಯಾರ್ಥಿಯು ಕಾಲೇಜಿನ ಮುಂಭಾಗದಲ್ಲಿ ಕುಳಿತು ಒಂಟಿ ಪ್ರತಿಭಟನೆ ನಡೆಸುತ್ತಿದ್ದು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕು ಹಾಗೂ ಡಿಬಾರ್ ಹಿಂಪಡೆಯಬೇಕೆಂದು ವಿದ್ಯಾರ್ಥಿ ತನ್ನ ಅಳಲನ್ನು ತೋರಿಸಿಕೊಂಡಿದ್ದಾನೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅವರು, ‘ಕೆಲ ದಿನಗಳ ಹಿಂದೆ 8 ರಿಂದ ಒಂಬತ್ತು ವಿದ್ಯಾರ್ಥಿಗಳು ಪಿಎಫ್ಐ ಸಂಘಟನೆ ಎಂದು ಹೇಳಿಕೊಂಡು ಬ್ಯಾನರ್ ಹಿಡಿದು ಕಾಲೇಜಿನ ಅವಧಿಯಲ್ಲಿ ಬಸ್ ಸ್ಟಾಂಡ್ ನಲ್ಲಿ ಫೋಟೋ ತೆಗೆದಿದ್ದಲ್ಲದೆ, ವಾಣಿ ಕಾಲೇಜಿನ ಪಿಎಫ್ಐ ಪ್ರೆಸಿಡೆಂಟ್ ಎಂದು ಹಾಕಿ ವಿದ್ಯಾರ್ಥಿಯ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಟ್ರೊಲ್ ಮಾಡಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರನ್ನು ಕಾಲೇಜಿನಿಂದ ಅಮನಾತು ಮಾಡಿದ್ದಾರೆ.ಇದಾದ ಕೂಡಲೇ ವಿದ್ಯಾರ್ಥಿಯೋರ್ವ ಅಮಾನತು ಪತ್ರವನ್ನು ಕೂಡ ಟ್ರೊಲ್ ಮಾಡಿದ್ದು, ತಮಗಿಚ್ಛೆ ಬಂದಂತೆ ಬರೆದು ಹಾಕಿದ್ದಾರೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೊಮ್ಮೆ ಅವರನ್ನು ಕಾಲೇಜಿಗೆ ಸೇರಿಸಿದ್ದು, ಅವರ ತಂದೆ ತಾಯಿ ಸಹಿ ಹಾಕಿರುವ ಮುಚ್ಚಳಿಕೆಯನ್ನು ಬರೆಸಿದ್ದಾರೆ. ಅಷ್ಟಾಗಿಯೂ ಈ ವಿದ್ಯಾರ್ಥಿ ತನ್ನನ್ನು ತಾನು ಸುಧಾರಿಸಿಕೊಳ್ಳದೆ ಇಂತಹದ್ದೇ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರಿಂದ ಆತನನ್ನು ಡಿಬಾರ್ ಮಾಡಿದ್ದೇವೆ’ ಎಂದು ಹೇಳಿದ್ದಾರೆ.