ಕಾಸರಗೋಡು: ಇಲ್ಲಿನ ಕುರುಡಪದವಿನಲ್ಲಿ ನಾಗರ ಹಾವಿನ ಕಡಿತದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆಯಿಂದಾಗಿ ಸಾವಿಗೀಡಾದ ಮಹಿಳೆಯ ಕುಟುಂಬ ಹಾಗು ಸಂಬಂಧಿಕರಿಗೆ ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ.
ಬುಧವಾರದಂದು ರಾತ್ರಿ ಕುರುಡಪದವು ನಿವಾಸಿ ದಿ|ಮಾಂಕು ಅವರ ಪತ್ನಿ ಚೋಮು(64) ನಾಗರ ಹಾವು ಕಡಿದು ಸಾವಿಗೀಡಾಗಿದ್ದರು. ರಾತ್ರಿ 12ಗಂಟೆಯ ಸುಮಾರಿಗೆ ತಮ್ಮ ಮನೆಯೊಳಗೆ ನಿದ್ದೆ ಮಾಡಿದ್ದ ಚೋಮು ಅವರಿಗೆ ಹಾವು ಕಡಿದಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಚೋಮು ಅವರ ಅಂತ್ಯ ಸಂಸ್ಕಾರ ಗುರುವಾರ ನಡೆಸಲಾಗಿತ್ತು. ಆ ಬಳಿಕ ರಾತ್ರಿ ವೇಳೆ ಸಂಪ್ರದಾಯ ಪ್ರಕಾರ ಮನೆಯ ಚಾವಡಿಯಲ್ಲಿ ಬೂದಿ ಹರಡಿ ಅದರ ಮಧ್ಯೆ ಜೊಂಬಿನಲ್ಲಿ ನೀರು ಇಡಲಾಗಿತ್ತು. ಮನೆಯ ಬಾಗಿಲುಗಳನ್ನು ಭದ್ರಪಡಿಸಿ ಮನೆ ಮಂದಿ ಸಹಿತ ನಾಲ್ಕು ಮಂದಿ ಜಗಲಿಯಲ್ಲಿ ನಿದ್ದೆ ಮಾಡಿದ್ದರು. ಜು.5 ರಂದು ಬೆಳಗ್ಗೆ ಎದ್ದು ನೋಡಿದಾಗ ಬೂದಿ ಮೇಲೆ ಹಾವು ಹರಿದ ಗುರುತು ಹಾಗು ಚೊಂಬಿನಲ್ಲಿದ್ದ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂತು. ಚೋಮು ಅವರಿಗೆ ಕಡಿದ ನಾಗರಹಾವನ್ನು ಗುರುವಾರ ಬೆಳಗ್ಗೆ ಹಿಡಿದು ಕೊಂಡೊಯ್ದು ದೂರದ ಅರಣ್ಯದಲ್ಲಿ ಬಿಡಲಾಗಿತ್ತು. ಅಲ್ಲದೆ ಮನೆಯೊಳಗೆ ಬೇರೆ ಹಾವು ಇಲ್ಲವೆಂದು ಖಚಿತಪಡಿಸಲಾಗಿತ್ತು. ಆದರೆ ಬೂದಿಯ ಮೇಲೆ ಹಾವಿನ ಸಂಚಾರ ಗುರುತು ಕಂಡು ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾವಿನ ಸಂಚಾರದ ಗುರುತು ಹೇಗೆ ಉಂಟಾಯಿತು ಎಂಬುದ್ದು ತಿಳಿಯುತ್ತಿಲ್ಲ ಎಂದು ಚೋಮು ಅವರ ಸಂಬಂಧಿಕ ಕುರುಡಪದವಿನ ಸತೀಶ್ ಹೇಳಿದ್ದಾರೆ.