ಮಂಗಳೂರು : ವೃತ್ತಿ ಮಾತ್ಸರ್ಯದಿಂದ ಜೀವಂತ ಇದ್ದ ವ್ಯಕ್ತಿಯನ್ನು ಅಪಘಾತದಲ್ಲಿ ತೀರಿಕೊಂಡ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಘಟನೆ ನಡೆದಿದೆ.
ದೈವಗಳಿಗೆ ಮದು ಹೇಳುತ್ತಿದ್ದ ಕೊಡಮಣಿತ್ತಾಯ ದೈವದ ಪಾತ್ರಿ ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ ಸುರತ್ಕಲ್ ಇವರು ನಿನ್ನೆ ಮುಂಜಾನೆ ಬಿಜೈ ಕಾಪಿಕಾಡ್ ಬಳಿ ನಡೆದ ಕಾರು ಮತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ವಿಧಿವಶರಾಗಿದ್ದಾರೆ ಎಂದು ವಾಟ್ಸಾಪ್ ಸಂದೇಶ ರವಾನೆಯನ್ನು ಕಿಡಿಗೇಡಿಗಳು ಮಾಡಿದ್ದರು. ಈ ಸುದ್ದಿ ದೈವಾರಾಧಕರ ವಲಯದಲ್ಲಿ ಒಂದು ಕ್ಷಣ ಆಘಾತವನ್ನು ಉಂಟು ಮಾಡಿತ್ತು.
ದೈವಾರಾಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅಭಿಲಾಷ್ ಚೌಟ ಅವರ ಬಗ್ಗೆ ವೃತ್ತಿ ಮಾತ್ಸರ್ಯ ಹೊಂದಿದವರು. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ಅಪಪ್ರಚಾರವನ್ನು ಮಾಡುತ್ತಿದ್ದು ಈಗ ಆತ ತೀರಿಕೊಂಡಿದ್ದಾರೆ ಎಂದು ಪ್ರಚಾರ ಮಾಡುವಷ್ಟು ಹೀನ ಮಟ್ಟಕ್ಕೆ ಇಳಿದಿದ್ದಾರೆ ಎಂಬ ಅಭಿಪ್ರಾಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಲಾಷ್ ಚೌಟ ಇತ್ತೀಚೆಗೆ ತನ್ನ ಗುರುಗಳು ನಿಧನರಾದ ನಂತರ ವೃತ್ತಿ ಮಾತ್ಸರ್ಯದಿಂದ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳನ್ನು ದೈವ ದೇವರುಗಳು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.