ಮಂಗಳೂರು: ಜಿಲ್ಲಾ ಕಂಬಳ ಸಮಿತಿಯು ಓಟಗಾರರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಕಂಬಳ ಓಟಗಾರನಿಗೆ ಹೊಸ ನಿಯಮ ಜಾರಿಗೆ ತಂದಿದೆ.
ಈ ಹಿಂದೆ ಒಂದು ಕೂಟದಲ್ಲಿ 5-6 ಜತೆ ಕೋಣ ಓಡಿಸಿದ ಕಂಬಳದ ಓಟಗಾರರು, ಮುಂದಿನ ದಿನಗಳಲ್ಲಿ ಗರಿಷ್ಠ 3 ಜತೆ ಕೋಣಗಳನ್ನು ಮಾತ್ರ ಓಡಿಸಬಹುದು. ಇದಕ್ಕೆ ಮುಖ್ಯ ಕಾರಣ ಓಟಗಾರರ ಆರೋಗ್ಯ ಕಾಳಜಿಯಾಗಿದೆ ಎಂದು ಕಂಬಳ ಸಮಿತಿ ತಿಳಿಸಿದೆ.
ಜೊತೆಗೆ ಕೆರೆಯ “ಗಂತ್” ನಲ್ಲಿ ಕೋಣ ಬಿಡುವಲ್ಲಿಯೂ ಒಬ್ಬರಿಗೆ 3 ಜತೆ ಕೋಣವನ್ನು ಮಾತ್ರ ಬಿಡುವ ಅವಕಾಶ ಒದಗಿಸಿದೆ. ಇನ್ನು ಈ ನಿಯಮಕ್ಕೆ ಆಗಸ್ಟ್ನಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಒಪ್ಪಿಗೆ ಪಡೆದು, ಮುಂದಿನ ಕಂಬಳದಿಂದಲೇ ಈ ನಿಯಮವನ್ನು ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಈ ಹೊಸ ಬದಲಾವಣೆಗೆ ಮುಖ್ಯ ಕಾರಣ: ಒಬ್ಬನೇ ಓಟಗಾರ ಒಂದು ಕೂಟದಲ್ಲಿ ಹಲವು ಜತೆ ಕೋಣಗಳನ್ನು ಓಡಿಸುವ ಪ್ರಮೇಯವಿದೆ. ಒಮ್ಮೆ ಕರೆಯಲ್ಲಿ ಓಡಿ ತತ್ಕ್ಷಣವೇ ಮತ್ತೆ ಆತ ಓಟಕ್ಕೆ ಸಿದ್ಧವಾಗಲು ಸಾಧ್ಯವಾಗುತ್ತಿಲ್ಲ ಹಾಗೂ ಪದಕ ಗೆಲ್ಲುವ ಕೋಣಗಳನ್ನು ಸೀಮಿತ ಓಟಗಾರರೇ ಓಡಿಸುತ್ತಿದ್ದರೆ. ಹೊಸ ಓಟಗಾರರಿಗೆ ಅವಕಾಶ ಸಿಗುವುದಿಲ್ಲ. ಜತೆಗೆ “ಗಂತ್’ನಲ್ಲಿ ಕೋಣ ಬಿಡುವಲ್ಲಿಯೂ ಹೆಚ್ಚು ಜನರಿರುತ್ತಾರೆ ಹಾಗೂ ಕೆಲವೇ ಮಂದಿ ಹಲವು ಕೋಣಗಳನ್ನು ಬಿಡುತ್ತಾರೆ. ಇಲ್ಲೂ ಹೊಸಬರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲವಾದ್ದರಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.