ಮಂಗಳೂರು: ಮುನ್ನೂರು ಗ್ರಾಮದ 5ನೆ ವಾರ್ಡಿನ ಸದಸ್ಯೆ ರೆಹನಾ ಭಾನು ಅವರು ಮದನಿ ನಗರದ ಮೂರನೆ ಅಡ್ಡರಸ್ತೆಯ ಬಳಿ ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುವನ್ನು ತಡರಾತ್ರಿಯವರೆಗೂ ಸ್ವತಃ ನಿಂತು ತೆರವುಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ನಾಲ್ಕು ಮೆಡಿಕಲ್ ಕಾಲೇಜುಗಳಾದ ಯೆನೆಪೋಯ, ನಿಟ್ಟೆ, ಫಾದರ್ ಮುಲ್ಲರ್, ಕಣಚೂರು ಆಸ್ಪತ್ರೆಗಳಿಗೆ ತೆರಳುವ ಮದನಿ ನಗರ ಮುಖ್ಯ ರಸ್ತೆಯ ಬದಿಯಲ್ಲಿ ಕಳೆದೊಂದು ವಾರದಿಂದ ತ್ಯಾಜ್ಯ ವಸ್ತುಗಳು ರಾಶಿ ಬೀಳುತ್ತಿತ್ತು. ಇದರಿಂದ ಪರಿಸರದಲ್ಲಿ ಗಬ್ಬು ವಾಸನೆ ನಾರುತ್ತಿತ್ತಲ್ಲದೆ ಕಾಲೇಜು ಆಸ್ಪತ್ರೆಗೆ ಆಗಮಿಸುವ ಹೊರ ರಾಜ್ಯ, ಹೊರ ಜಿಲ್ಲೆಯ ಜನರು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಗ್ರಾಪಂಗೂ ಸಾರ್ವಜನಿಕರಿಂದ ದೂರು ಕೂಡ ಕೊಡಲಾಗಿತ್ತು. ಅದರಂತೆ 5ನೆ ವಾರ್ಡಿನ ಗ್ರಾಪಂ ಸದಸ್ಯೆ ರೆಹನಾ ಭಾನು ಮೊನ್ನೆ ರಾತ್ರಿ ಜೆಸಿಬಿ ಬಳಸಿ ರಸ್ತೆ ಬದಿ ರಾಶಿ ಹಾಕಲಾಗಿದ್ದ ತ್ಯಾಜ್ಯವನ್ನು 5-6 ಟಿಪ್ಪರ್ ಮೂಲಕ ತಡರಾತ್ರಿಯವರೆಗೂ ಸ್ವತಃ ಸ್ಥಳದಲ್ಲಿ ನಿಂತು ತೆರವುಗೊಳಿಸಿದ್ದಾರೆ.
ಕಳೆದೊಂದು ವಾರದಿಂದ ಈ ಪರಿಸರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯರಾಶಿ ಕಾಣಿಸತೊಡಗಿದ್ದು, ಯಾರೂ ಇಲ್ಲಿ ಕಸ ಹಾಕುತ್ತಿದ್ದಾರೆ ಎಂಬುದು ತಿಳಿಯುವುದು ಅನಿವಾರ್ಯವಾಗಿತ್ತು. ನೋಡು ನೋಡುತ್ತಿದ್ದ ಹಾಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ತಂದು ಎಸೆಯುವುದನ್ನು ಪತ್ತೆ ಹಚ್ಚಿದ್ದು, ಒಬ್ಬರಿಂದ ಎಸೆಯಲಾದ ತ್ಯಾಜ್ಯವನ್ನು ಹೆಕ್ಕಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಆ ಬಳಿಕ ಗ್ರಾಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಸದಸ್ಯರಾದ ಸಿರಾಜ್ ಮದನಿ ನಗರ, ಆರ್ಕೆಸಿ ಅಬ್ದುಲ್ ಅಝೀಝ್, ಪಿಡಿಒ ರವೀಂದ್ರ ರಾಜೀವ್ ನಾಯ್ಕೆ ಮತ್ತು ವಾರ್ಡಿನ ಇತರ ಸದಸ್ಯರ ಸಹಕಾರ ಪಡೆದು ಜೆಸಿಬಿ ಬಳಸಿ ತ್ಯಾಜ್ಯ ತೆರವುಗೊಳಿಸಿದೆವು. ಅಲ್ಲದೆ ಸೋಲಾರ್ ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಸಿ ಮುಂದೆ ತ್ಯಾಜ್ಯ ಎಸೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.